ಅವಳು-ಇವಳು
(ಚಿತ್ರ ಕೃಪೆ: ಮಂಜುನಾಥ್ .ಎಸ್ .ರೆಡ್ಡಿ )
ಅವಳು: ನಿನಗೆ ಬುದ್ದಿ ಇದೀಯ? ಅಷ್ಟು ಮಗುಮ್ಮಾಗಿ ಇದ್ದೆ ಕಾಲೇಜ್ ದಿನಗಳಲ್ಲಿ. ಏನ್
ಬಂದಿದ್ದಿದ್ದು ನಿನಗೆ? ಯಾಕೆ ಹೀಗಾಗಿ ಹೋದೆ?
ಇವಳು: ಏನಾಯ್ತು ಅಂತ ಹೀಗ್ ಕೂಗಾಡ್ತಿದೀಯೆ? ಕೂಲ್ ಡೌನ್.
ಅವಳು: ಇನ್ನು ಏನಾಗ್ಬೇಕು ಅಂತ ಇದೀಯ ಹೇಳು? ಈ ಫೋಟೋಗಳನ್ನ ನೋಡಿದ್ಯ? ಕರ್ಮ, ಅಸಹ್ಯ ಅನಿಸೋಲ್ವೇನೆ ನಿನಗೆ ಇದನ್ನೆಲ್ಲ ಮಾಡೋಕೆ?
ಇವಳು: ಅಸಹ್ಯ ಯಾಕನಿಸ್ಬೇಕು? ಅದೆಲ್ಲ ಗ್ಲಾಮರ್ ಲೋಕದಲ್ಲಿ ಸಹಜ. ಅದಕ್ಕಿಂತಲೂ ಕಡಿಮೆ
ಬಟ್ಟೆಯಲ್ಲಿ ಫೋಸ್ ಮಾಡೋರಿದಾರೆ ಗೊತ್ತ? ತೋರಿಸ್ಲ?
ಅವಳು: ಬೇಡಮ್ಮ ಇದನ್ನೆ ನೋಡಿ ಅರಗಿಸ್ಕೋಳೋಕೆ ಆಗದೆ ಸಾಯ್ತಿದೀನಿ. ಅಲ್ವೆ ಯಾರ್ಯಾರೋ ಮಾಡ್ತಾರೆ ಅಂತ ನೀನು ಮಾಡ್ಬಿಡೋದ? ನಿನ್ನ ಮನಸಿಗೆ ಇದೆಲ್ಲ ತಪ್ಪು ಅನ್ನಿಸೋಲ್ವ?
ಇವಳು: ಹ್ಹ ಹ್ಹ! ತಪ್ಪ? ಅದು ಹೇಗೆ ತಪ್ಪಾಗುತ್ತೆ? ನನ್ನ ಮೈ ನನ್ನಿಷ್ಟ.
ಅವಳು: ಮೈ ನಿನ್ನದಾದ್ರೆ, ಏನಾದ್ರು ಮಾಡಬಹುದು ಅನ್ಕೊಂಡಿದೀಯ? ಮಾನ ಮರ್ಯಾದೆ
ಅನ್ನೋದು ಇರುತ್ತೆ. ಅದರ ಹೆಸರು ನೆನಪಿದೆಯ?
ಇವಳು: ಮರ್ಯಾದೆಯ ಲಿಮಿಟ್ಸ್ ಎಲ್ಲಿವರ್ಗೂ ಹೇಳು? ಸೀರೆನಲ್ಲಿ ಕಾಣೋ ಸೊಂಟ
ತೋರ್ಸೋವರ್ಗೂ ಅಷ್ಟೇ? ಅಲ್ವ? (ನಗುತ್ತಾಳೆ)
ಅವಳು: (ಹತಾಶಳಾಗಿ) ನಿನಗೆ ನಿಜವಾಗ್ಲು ಏನೂ ಅನ್ನಿಸೋದೆ ಇಲ್ವ? ನಗ್ತಿದೀಯ.
ಇವಳು: ಸರಿ ನೀನೆ ಹೇಳಮ್ಮ ನನಗೇನನಿಸ್ಬೇಕು, ಇದನ್ನೆಲ್ಲ ಬಿಟ್ಬಿಡ್ಲ? ನಿನ್ನ ಪ್ರಕಾರ
ಈಗಾಗ್ಲೆ ನನಗೆ ಮರ್ಯಾದೆ ಹೋಗಿ ಆಗಿದೆಯಲ್ಲ, ಬಿಟ್ಟು ಬಿಟ್ಟರೆ ಹೋದ ಮಾನ ವಾಪಸ್ ಬಂದು
ಬಿಡತ್ತ? ಪರ್ವಾಗಿಲ್ವೆ ಬಲೇ ಫ್ಲೆಕ್ಸಿಬಲ್ ನಿನ್ನ ಈ ಮಾನ ಮರ್ಯಾದೆಗಳು!!
ಅವಳು: ತಮಾಶೆ ಮಾಡ್ಬೇಡ ನಾನು ತುಂಬಾ ಸೀರಿಯಸ್ ಆಗಿ ಹೇಳ್ತಿದೀನಿ.
ಇವಳು: ಇದರಲ್ಲಿ ಸೀರಿಯಸ್ ಆಗೋ ಅಂತದ್ದು ಏನಿದೆ ಡಿಯರ್? ನನಗೆ ಅರ್ಥವಾಗ್ತಿಲ್ಲ.
ಅವಳು: ಯಾವುದರ ಬಗ್ಗೆನೂ ಭಯವೇ ಇಲ್ವೇನೆ ನಿನಗೆ, ಸಮಾಜ, ಅಪ್ಪ-ಅಮ್ಮ?
ಇವಳು: ಅಲ್ಲಿ ಇರೋದು ಪ್ರಾಬ್ಲಮ್, ಯಾಕಿರ್ಬೇಕು ಭಯ? ಕೆಲಸವಿಲ್ಲದೆ ಅಲೀತಿದ್ದಾಗ
ನಿನ್ನ ಸಮಾಜವೇ ನನಗೆ ಈ ದಾರಿ ತೋರ್ಸಿದ್ದು. ಇನ್ನು ಅಪ್ಪ-ಅಮ್ಮ, ಒಂದೆರೆಡು ದಿನ
ಕೂಗಾಡಿದ್ರು, ಈಗವರಿಗೆ ಅಭ್ಯಾಸವಾಗಿ ಹೋಗಿದೆ.
ಅವಳು: ಆತ್ಮ ಸಾಕ್ಷಿ ಅನ್ನೋದಿರತ್ತಲ್ವ ಅದಕ್ಕಾದ್ರು ಹೆದರಬೇಕಿತ್ತು ನೀನು.
ಇವಳು: ಫಿಲ್ಮ್ ಡೈಲಾಗ್ ಗಳು ಹೊಡೀಬೇಡ. ನಾನು ಯಾರನ್ನು ಮೋಸ ಮಾಡಿ ಸಂಪಾದಿಸ್ತಿಲ್ಲ.
ಇದು ನಾನು ಕಷ್ಟ ಪಟ್ಟು ದುಡಿತಿರೋ ದುಡ್ಡು.
ಅವಳು: ಕಷ್ಟಪಟ್ಟು?! ಹ್ಹ ಹ್ಹ!! ಕಾಣಿಸ್ತಿದೆ ನಿನ್ ಕಷ್ಟ!
ಇವಳು: ನಿನಗೆ ಹಾಗನ್ಸೋದು ಸಹಜ ಬಿಡು. ನಿಂದಿನ್ನೂ ಹಳ್ಳಿ ಬುದ್ದಿ. ಇದು ಸೂಪರ್ ಫಾಸ್ಟ್ ಯುಗ ಕಣೇ, ಅವಕಾಶಗಳು ಸಿಕ್ಕಾಗ ಎನ್ ಕ್ಯಾಶ್ ಮಾಡಿಕೊಳ್ಬೇಕು.
ಅವಳು: ಹೇಗಾದ್ರು ಸರಿ ಅಲ್ವ?
ಇವಳು: ಹ್ಮ್ ಸರೀನೆ. ನಮಗೆ ಸರಿ ಇದ್ದದ್ದು ಎಲ್ಲರಿಗೂ ಸರಿ ಕಾಣ್ಬೇಕು ಅಂತೇನು ಇಲ್ಲ ಅಲ್ವ. ನನಗಿಂತ ಕೆಳಗಿಳಿದು ಸಂಪಾದಿಸ್ತಿರೋ ಹುಡ್ಗೀರಿದಾರೆ, ಅವ್ರಿಗೆ ಹೋಲಿಸ್ಕೊಂಡ್ರೆ ನಾನು ಬೆಟರ್ ಅಂತ ನನ್ನ ಭಾವನೆ. ಫಿಲ್ಮ್ ಗಳಲ್ಲಿ ಹಿರೋಯಿನ್ ಗಳು ಇದೇ ಕೆಲ್ಸ ಮಾಡಿದ್ರೆ, ನೀನೂ ಕಣ್ ಕಣ್ ಬಿಟ್ಟು ನೋಡ್ತಿಯ, ನಿನ್ನ ಗೆಳತಿ ಮಾಡಿದ್ರೆ ಸಹಿಸೋಕಾಗೊಲ್ವ?
ಅವಳು: ಹಾಗಲ್ವೆ, ನಿನ್ನ ಬಗ್ಗೆ ಜನರ ಅಭಿಪ್ರಾಯ ಏನಿರಬಹುದು ಅಂತ ಯೋಚನೆ ಮಾಡಿದೀಯ? ನಿನ್ನಂತಹ ಯೋಚನೆ ಹೊಂದಿರೋ ಹುಡ್ಗೀರ್ಗೆ ಸಮಾಜದಲ್ಲಿ ಯಾವ ಸ್ಥಾನವಿದೆ ಅಂತ ಗೊತ್ತಿದೆಯ? ಯಾಕೆ ಹೀಗೆ ನಿನ್ನ ಭವಿಷ್ಯದ ಜೊತೆ ಆಟವಾಡ್ತಿದೀಯ?
ಇವಳು: ಜನರ ಅಭಿಪ್ರಾಯ ಕಟ್ಕೊಂಡು ನನಗೆ ಆಗಬೇಕಿರೋದು ಏನೂ ಇಲ್ಲ. ಹಣವಿಲ್ಲದ
ಬಿಕಾರಿಗಳಿಗೆ ನಿನ್ನ ಸಮಾಜವೇನು ಮಣೆ ಹಾಕಿ ಪೀಠದ ಮೇಲೆ ಕೂರ್ಸತ್ತ? ಭವಿಷ್ಯದಲ್ಲಿ
ತೊಂದರೆ ಆಗ್ಬಹುದು ಅಂತ ನಾನು ವರ್ತಮಾನವನ್ನ ಬಲಿ ಕೊಡೋಕೆ ಆಗಲ್ಲ.
ಅವಳು: ಸರಿ ಸಮಾಜದ ವಿಷಯ ಬೇಡ, ನಿನ್ನ ಹಿತ ದೃಷ್ಟಿಯಿಂದಲೇ ನೋಡು, ನೀನು ಹೀಗೆಲ್ಲ
ಮಾಡೋದ್ರಿಂದ ಎಷ್ಟು ಸುರಕ್ಷಿತವಾಗಿರಬಲ್ಲೆ?
ಇವಳು: ಪೇಪರ್ ಓದ್ತೀಯ?
ಅವಳು: ಇದೆಂತ ಪ್ರಶ್ನೆ?
ಇವಳು: ಅಲ್ಲ ನ್ಯೂಸ್ ಗಳೆಲ್ಲ ನೋಡಲ್ವ ನೀನು, ನಾಲ್ಕು ವರ್ಷದ ಹುಡುಗಿ, ಅವಳ
ಟೀಚರ್ನಿಂದ ಅತ್ಯಚಾರಕ್ಕೊಳಗಾಗಿದ್ಲು. ಅರವತ್ತೇಳು ವರ್ಷದ ಮುದುಕಿ ಪಾಪ ಸಾಯೋ
ವಯಸ್ಸು, ಮೂವತ್ತು ವರ್ಷದ ಗಂಡಸೊಬ್ಬ ಅತ್ಯಚಾರ ಮಾಡಿದ್ದ. ಇವತ್ತಿಗೂ ಹಳ್ಳಿಗಳಲ್ಲೇ
ನಗರಗಳಿಗಿಂತ ಅತ್ಯಚಾರದ ಸಂಖ್ಯೆ ಹೆಚ್ಚು. ಮೈ ಮುಚ್ಚಿಕ್ಕೊಂಡ ಮಾತ್ರಕ್ಕೆ
ಸುರಕ್ಷಿತವಾಗಿರ್ಬಹುದು ಅಂತೀಯ? ಇದನ್ನ ನಾನು ಮಾಡದಿದ್ರೆ, ಇನ್ನೊಬ್ಳು ಯಾರಾದ್ರು
ಮಾಡ್ತಾಳೆ, ನೋಡೋ ಕಣ್ಣಿಗೆ ಎರಡೂ ಒಂದೆ, ಅಲ್ಲಿ ಕಾಣೋದು ಬೆತ್ತಲು ಮಾತ್ರ! ಮುಖ
ಅಲ್ಲ.
ಅವಳು: ನನಗೆ ಕಾಣೋದು ಬೆತ್ತಲಾಗುತ್ತಿರುವ ನಿನ್ನ ವ್ಯಕ್ತಿತ್ವ. ನಿನ್ನ ಅಪ್ಪ
ಅಮ್ಮನಿಗೆ ಕಾಣೋದು ನಿನ್ನ ಮೈ ಅಲ್ಲ, ಅದರಿಂದೆ ಇರುವ ಅವರ ಅಸಹಾಯಕತೆ. ನಿನ್ನ
ಅಂತರಂಗಕ್ಕೆ ಕಾಣುವುದು ನಿನ್ನ ಆತ್ಮಸಾಕ್ಷಿಯ ಕೊಲೆ!
ಇವಳು: ಏನೇ ಆದರೂ ನಾನೀಗ ಹಿಂದೆ ಬರೋದಿಕ್ಕಾಗುಲ್ಲ. ನೀನು ನನ್ನ ಹತ್ರ ವಾದಿಸಬೇಡ. ಸುಮ್ಮನೋಗು.
ಅವಳು: (ಮೌನ)
ಹುಂ! ಕಾಲವೇ ಹಾಗಿದೆ. ಇಂದಿನ ದಿನ ನೋಡಿಕೊಂಡ್ರೆ ಸಾಕಾಗಿದೆ. ನಾಳೆ ಏನೋ ಹೇಗೋ? ಸಮಾಜದಲ್ಲಿ ಒಗ್ಗೂಡಿಕೊಂಡು ಬಾಳುವ ಪರಿಯೇ ಬದಲಾಗುತ್ತಿದೆ.
ಹೇಮಾ,
ಚೆಂದದ ಬರಹ, ವೈಚಾರಿಕತೆಯ ಒಳ ಹೊಕ್ಕು ಬರೆದಂತಿದೆ…
ನಿಮ್ಮ ಸಾಮಾಜಿಕ ಕಳಕಳಿಗೆ ಅಭಿನಂದನೆಗಳು…
ಅವಳು, ಇವಳು ಸಂಭಾಷಣೆ ಮನ ತಟ್ಟುವಂತಿದೆ, ಸತ್ಯ ಸ್ಥಿತಿ ಕೂಡಾ,
manassaakshiyoDane naDeda maatukathe idallave?
Hemaji,
Thought provoking write up ri.
Nimma ella barahagalanoo odide..tumba aalavaagi baritira..kannige kattuvante.
Abhinandanegalu.
Sunil.
Thank you so much. 🙂
ಹೇಮಾ, ಏಕಪಾತ್ರಾಭಿನಯದಲ್ಲಿ ಮನಸೊಂದು ಮಾತೆರಡು ಅನ್ನುವಂತೆ ನಿಮ್ಮ ಮನದೊಳಗಿನ ತಾಕಲಾಟ, ಪೀಕಲಾಟಗಳಿಗೆ ಶಬ್ದಗಳನ್ನು ಕೊಟ್ಟು..ಗೆಳತಿ ಎಂಬುವಳನ್ನು ಎದುರು ನಿಲ್ಲಿಸಿ…ವ್ಯವಸ್ಥೆಗೆ ಅವಳನ್ನು ಪ್ರಭಾರಿಯನ್ನಾಗಿಸಿ ನಿಮ್ಮ ಸ್ವೇಚ್ಛೆಗಳನ್ನು ಬನಬಂದಂತೆ ಬಿಚ್ಚಿಡುವಲ್ಲಿ ಸಫಲರಾಗಿದ್ದೀರೆಂದು ಹೇಳದೇ..ಮತ್ತು ಅದಕ್ಕಾಗಿ ಅಭಿನಂದಿಸದೇ ಇರಲಾಗುತ್ತಿಲ್ಲ…Good work,,,keep it up.
ತವಿಶ್ರೀ,
ಪ್ರತಿಕ್ರಿಯೆಗೆ ಧನ್ಯವಾದಗಳು, ಬದಲಾಗುತ್ತಿರುವುದು ಜನರ ಮನಸ್ಥಿತಿಯಷ್ಟೇ, ಎಲ್ಲದಕ್ಕೂ ಕಾಲವನ್ನು ಹೊಣೆ ಮಾಡಿ ನಮ್ಮ ಬೇಳೆ ಬೇಯಿಸುತ್ತಿದ್ದೇವೆ ಅನಿಸುವುದಿಲ್ಲವೇ ನಿಮಗೆ?
ರಾಜೇಶ್,
ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಗುರುಮೂರ್ತಿ,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
ಡಿಜೇ,
ಹೌದು, ಮನಸ್ಸಾಕ್ಷಿಯೊಂದಿಗಿನ ಮಾತುಗತೆಯೇ, ಕರೆಕ್ಟ್ ಗೆಸ್. ಪ್ರತಿಕ್ರಿಯೆಗೆ ಧನ್ಯವಾದ.
ಅನಿಕೇತನ,
ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ನನ್ನನ್ನು ಇನ್ನಷ್ಟು ಬರೆಯಲು ಪ್ರೋತ್ಸಾಹಿಸುತ್ತದೆ 🙂
ಡಾ|ಆಜಾದ್,
ಯಾವುದರ ಪರವಹಿಸುವುದೂ ನನ್ನ ಉದ್ದೇಶವಾಗಿರಲಿಲ್ಲ, ಆದರೆ ಮತ್ತೊಮ್ಮೆ ಆ ಬರಹವನ್ನು ಒಬ್ಬ ಓದುಗಳಾಗಿ ಓದಿಕೊಂಡಾಗ ಅದು ಹುಡುಗಿಯೊಬ್ಬಳ ಸ್ವೇಚ್ಚೆ, ಸಮಾಜದ ತಾರತಮ್ಯತೆಯ ಬಗ್ಗೆ ಆಕೆಯ ಧ್ವನಿಗಳನ್ನೆ ಪ್ರತಿನಿಧಿಸುತ್ತಿವೆ. ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.
ಸುಸಂಕ್ರತ ಹೆಣ್ಣಿನ ಮನದ ಭಾವನೆಯನ್ನು ಬಿಚ್ಚಿಟ್ಟಿದ್ದೀರಿ. ಥ್ಯಾಂಕ್ಸ್
ಮೆಚ್ಚಿದ್ದಕ್ಕೆ ಧನ್ಯವಾದಗಳು ಅಶ್ರಫ್.
ಸರಿತಪ್ಪುಗಳ ತಾಕಲಾಟ ,ಚೆನ್ನಾಗಿದೆ ….ಅಭಿನಂದನೆಗಳು .