ಕತೆಯಾದ ಕುಂಟಪ್ಪ!

ಕುಂಟಪ್ಪನ ಹೆಸರು ಕುಂಟಪ್ಪನಲ್ಲ!

ಈಗ್ಯೆ ಎರೆಡು ವರ್ಷದ ಕೆಳಗೆ ಕುಂಟಪ್ಪನನ್ನು ಯಾರೂ ಕುಂಟಪ್ಪನೆಂದು
ಕರೆಯುತ್ತಿರಲಿಲ್ಲ. ಕುಂಟಪ್ಪನ ನಿಜವಾದ ಹೆಸರು ಮನ್ನೋಜಿ ರಾವ್ ಎಂದು. ಅಕಸ್ಮಾತಾಗಿ
ಯಾರಾದರೂ ತನ್ನ ಹೆಸರು ಹಿಡಿದು ಕೂಗಿದರೆ ಕುಂಟಪ್ಪನು ತುಂಬಾ ಖುಷಿಗೊಳ್ಳುತ್ತಾನೆ.
ಎರೆಡು ವರ್ಷದ ಹಿಂದೆ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಕುಂಟಪ್ಪನನ್ನು ಹಳ್ಳಿಯೇನು
ಅಷ್ಟು ಆಸ್ಥೆಯಿಂದ ಜ್ಞಾಪಿಸಿಕೊಳ್ಳುತ್ತಿರಲಿಲ್ಲ. ತಿರುಗಿ ಬಂದ ಅವನಿಗೆ ಸಂಭ್ರಮದ
ಸ್ವಾಗತವನ್ನೂ ಕೋರಲಿಲ್ಲ. ಇಂಥಹ ಎಷ್ಟೊ ಕುಂಟಪ್ಪರನ್ನು ಒಳಗೊಂಡ ಹಳ್ಳಿ ತನ್ನ ಪಾಡಿಗೆ
ತಾನಿದೆ.

ಕುಂಟಪ್ಪನ ಹಿನ್ನೆಲೆಯೂ ಏನಷ್ಟು ರೋಚಕವಾಗಿಲ್ಲ. ಈ ಮೊದಲು ಕುಂಟಪ್ಪನಿಗೆ
ಹಳ್ಳಿಯಲ್ಲೊಂದಷ್ಟು ಜಮೀನಿತ್ತು. ಈಗಿಲ್ಲ. ಕುಂಟಪ್ಪ ಒಂದಲ್ಲ ಎರೆಡು ಮದುವೆ ಆಗಿದ್ದ.
ಈಗ ಒಬ್ಬ ಹೆಂಡತಿಯೂ ಜೊತೆಗಿಲ್ಲ. ದೊಡ್ಡವಳು ಸತ್ತ ವರ್ಷಕ್ಕೇ ಇನ್ನೊಂದು ಮದುವೆಯಾದ
ಕುಂಟಪ್ಪನ ಎರಡನೇ ಹೆಂಡತಿ ಬಲು ಘಾಟಿ ಹೆಂಗಸು. ಕುಂಟಪ್ಪನೇನು ಮುಗ್ಧನಲ್ಲ. ಏರು
ದನಿಯಲ್ಲಿ ಜಗಳವಾಡುತ್ತಿದ್ದ ಅವಳನ್ನು ಮೂಲೆಗೆ ಕೆಡವಿ ಸಿಕ್ಕಸಿಕ್ಕಿದ್ದರಲ್ಲೆಲ್ಲ
ಸರಿಯಾಗಿ ಇಕ್ಕುತ್ತಿದ್ದ. ಅವನ ಒದೆತ ತಾಳಲಾರದೆ ಅವಳು ಹಿಂದಿನ ರಸ್ತೆಯ ಮಾಸ್ತರ ಜೊತೆ
ಓಡಿ ಹೋದಳು. ಇಬ್ಬಿಬ್ಬರನ್ನು ಕಟ್ಟಿಕೊಂಡು ಒಬ್ಬಳನ್ನೂ ಬಾಳಿಸದೇ ಹೋದ ಎಂದು, ಮಾತಿಗೆ
ಏನೂ ಸಿಗದಾಗ ಜನ ಕುಂಟಪ್ಪನ ಬಗ್ಗೆ ಆಡಿಕೊಳ್ಳುವುದುಂಟು. ಕುಂಟಪ್ಪನಿರುವ ಆ ಹಳ್ಳಿ
ಬೆಂಗಳೂರಿಗೆ ತೀರ ಸಮೀಪದಲ್ಲಿದೆ. ಬಿ.ಡಿ.ಎ ಲೇ ಔಟ್ ಗಳನ್ನು ಮಾಡಲು ಸರ್ಕಾರವು ರೈತರ
ಜಮೀನನ್ನು ಖರೀದಿ ಮಾಡಿತು. ಕುಂಟಪ್ಪನಿಗೆ ಊಟಕ್ಕೆ, ಸಾರಾಯಿಗೆ ಏನೂ ತೊಂದರೆ
ಇರಲಿಲ್ಲ. ಇದ್ದ ಜಮೀನಿನಲ್ಲಿ ಬೆಳೆದು, ವರ್ಷಕ್ಕಾಗುವಷ್ಟು ಇಟ್ಟುಕೊಂಡು
ಮಿಕ್ಕಿದ್ದನ್ನು ಮಾರಿ ಹೇಗೋ ಕಾಲ ತಳ್ಳುತ್ತಿದ್ದ. ಜಮೀನು ಮಾರಬೇಕಾದ ದರ್ದು ಖಂಡಿತ
ಅವನಿಗೆ ಇರಲಿಲ್ಲ. ಅವನು ಜಮೀನು ಮಾರಿದ್ದಕ್ಕೂ ಒಂದು ಹಿನ್ನಲೆಯಿದೆ.

ಕುಂಟಪ್ಪನಿಗೆ ಮಕ್ಕಳಿದ್ದಾರೆ. ಎರಡನೆ ಹೆಂಡತಿಯ ಮಕ್ಕಳು. ಮೊದಲನೆ ಹೆಂಡತಿಗೂ
ಮಕ್ಕಳಿದ್ದುವೇನೋ, ಅವರ ಬಗ್ಗೆ ಗೊತ್ತಿಲ್ಲ. ಈ ಎರಡನೆ ಹೆಂಡತಿ, ಮಾಸ್ತರ ಜೊತೆಗೆ ಓಡಿ
ಹೋಗುವ ಮೊದಲು ಇದ್ದ ಎರಡು ಮಕ್ಕಳನ್ನು ’ಹುಟ್ಟಿಸಿಲ್ವ ನೀನೇ ಸಾಕ್ಕೋ’ ಅಂತಂದು
ಕುಂಟಪ್ಪನ ಹತ್ತಿರವೇ ಬಿಟ್ಟು ಹೋಗಿದ್ದಳು. ತನ್ನ ಊಟಕ್ಕೆ ಪರದಾಡುತ್ತಿದ್ದ ಕುಂಟಪ್ಪ,
ಹಳ್ಳಿಯಲ್ಲಿ ಅವರಿಬ್ಬರನ್ನೂ ಸಾಕಲಾರದೆ, ಎರಡನೆ ಹೆಂಡತಿ ತಾಯಿಯ ಮನೆಗೆ ಅವನ್ನು
ಬಿಟ್ಟು ಬಂದಿದ್ದ. ಓಡಿಹೋದವಳ ಮಕ್ಕಳೆಂದು ಅವಕ್ಕೂ ಅಲ್ಲಿ ಸಿಕ್ಕ ಮರ್ಯಾದೆ
ಅಷ್ಟರಲ್ಲೇ ಇತ್ತು. ಚೆನ್ನಾಗಿ ಸಾಕುತ್ತಿಲ್ಲವೆಂದೂ ತಿಳಿದರೂ, ಅವರನ್ನು ಮನೆಗೆ ತಂದು
ಆರೈಕೆ ಮಾಡಲು ಚೈತನ್ಯವಿಲ್ಲದ ಅಸಹಾಯಕನಾಗಿದ್ದ ಕುಂಟಪ್ಪ ಆಗಾಗ ಹೋಗಿ ಮಕ್ಕಳನ್ನು
ನೋಡಿಕೊಂಡು, ಓಡಿ ಹೋದ ಹೆಂಡತಿಗೆ ಹಿಡಿ ಶಾಪ ಹಾಕಿ ಬರುತ್ತಿದ್ದ. ಇಬ್ಬರು ಮಕ್ಕಳೂ
ಬೆಳೆದು ಮದುವೆಯಾಗಿ ಈಗ ಇಬ್ಬಿಬ್ಬರು ಮಕ್ಕಳಿಗೆ ಪೋಷಕರಾಗಿದ್ದಾರೆ. ಆಟೋ
ಓಡಿಸಿಕೊಂಡಿದ್ದ ಅನುಭವದಿಂದಲೇ ಎಂಬಂತೆ ತಮಿಳು ಹುಡುಗಿಯನ್ನು ಓಡಿಸಿಕೊಂಡು ಹೋಗಿ
ಮದುವೆಯಾಗಿ, ಮಾವನ ಆಸ್ತಿಯ ಒಡೆಯನಾಗಿ ನೆಮ್ಮದಿಯಿಂದಿರುವವನು ಕುಂಟಪ್ಪನ ಹಿರಿಮಗ.
ಬಡತನದಲ್ಲೇ ಹುಟ್ಟಿ, ಮೂದಲಿಕೆಯಲ್ಲೇ ಬೆಳೆದು, ಅವರಿವರ ನೆರವಿನಿಂದ ಮದುವೆಯಾದ
ಹೆಣ್ಣುಮಗಳು ಮತ್ತು ಇಬ್ಬರು ಮಕ್ಕಳ ಅಮ್ಮ ಕುಂಟಪ್ಪನ ಎರಡನೆಯ ಸಂತಾನ. ಅಪ್ಪ-ಮಗ-ಮಗಳು
ಇವರಲ್ಲಿ ಸ್ವಾಭಾವಿಕವಾಗಿ ಇರಬೇಕಿದ್ದ ಪ್ರೀತಿ ಅವರಲ್ಲಿ ಇರಲಿಲ್ಲವೆನ್ನುವುದಕ್ಕಿಂತ
ಕಡಿಮೆ ಇತ್ತು ಎಂದರೆ ಸರಿಯೇನೋ.

ಕುಂಟಪ್ಪನ ಬಳಿ ಇದ್ದ ಜಮೀನು ಪಿತ್ರಾರ್ಜಿತವಾದ್ದರಿಂದ ಸಧ್ಯಕ್ಕೆ ಇದ್ದ ಇಬ್ಬರೂ
ಮಕ್ಕಳಿಗೂ ಅದರಲ್ಲಿ ಹಕ್ಕಿತ್ತು. ಬಿ.ಡಿ.ಎ. ಲೇ ಔಟುಗಳಾಗ ತೊಡಗಿ ಸರ್ಕಾರವು ಜಮೀನಿನ
ಖರೀದಿಗೆ ಒತ್ತಾಯಿಸಿದಾಗ, ಬೆಂಗಳೂರಿನಲ್ಲಿ ಇದ್ದುದ್ದರಲ್ಲೇ ಸಂಸಾರ ಮಾಡಿಕೊಂಡಿದ್ದ
ಕುಂಟಪ್ಪನ ಮಕ್ಕಳು, ಕುಂಟಪ್ಪನು ಸುತಾರಾಂ ಬೇಡವೆಂದರೂ ಕೇಳದೆ ಒಳ್ಳೆಯ ಬೆಲೆಗೆ
ಜಮೀನನ್ನು ಮಾರಿಬಿಟ್ಟರು. ಬಂದ ಹಣದಲ್ಲಿ ಸೈಟು ಮನೆ ಎಲ್ಲಾ ಖರೀದಿಸಲು ಆಗದೆ ಹೋದರೂ,
ಹಾಲಿ ಇದ್ದುದ್ದಕ್ಕಿಂತ ಅವರ ಜೀವನ ಉತ್ತಮ ಮಟ್ಟದ್ದಾಯಿತು. ಆದರೆ ಕುಂಟಪ್ಪನಿಗೆ
ಪೀಕಲಾಟಕ್ಕಿಟ್ಟುಕೊಂಡಿತು. ಜಮೀನಿಲ್ಲದೆ ಹಳ್ಳಿಯಲ್ಲಿ ತಾನು ಮಾಡುವುದೇನು ಎಂದು
ಜಮೀನು ಮಾರುವುದಕ್ಕೆ ಮುಂಚೆಯೇ ಮಕ್ಕಳಿಬ್ಬರಿಗೂ ಪ್ರಶ್ನಿಸಿದ್ದ, ಹೇಗಾದರೂ ಜಮೀನನ್ನು
ಮಾರಲೇ ಬೇಕೆಂದು ತೀರ್ಮಾನಿಸಿಕೊಂಡಿದ್ದ ಅವರಿಬ್ಬರೂ ’ನಾವಿಲ್ವ, ನಾವು ಸಾಕ್ತೀವಿ,
ನಮ್ಮನೇಲೆ ಬಂದಿರು’ ಎಂದು ಅವಸರಿಸಿ ಅವನ ಕೈಲಿ ಹೆಬ್ಬೆಟ್ಟೊತ್ತಿಸಿದ್ದರು. ಜಮೀನು
ಮಾರಿದ ಮೇಲೆ ಬಂದ ಹಣವನ್ನು ಹಂಚಿಕೊಂಡು, ಕುಂಟಪ್ಪನ ಕೈಲೊಂದಷ್ಟು ಹಣ ಇರುಕಿ ಹೋದ
ಮಕ್ಕಳು, ಮತ್ತವನ ಕಡೆ ತಿರುಗಿ ನೋಡಿರಲಿಲ್ಲ. ಕೈಲಿದ್ದ ಹಣ ಖಾಲಿಯಾಗುವವರೆಗೂ
ಕುಂಟಪ್ಪನಿಗೂ ಮಕ್ಕಳ ನೆನಪು ಬಂದಿರಲಿಲ್ಲ. ’ಕೂತು ಉಂಡರೆ ಕುಡಿಕೆ ಹೊನ್ನೂ ಸಾಲದು’
ಎಂಬ ಮಾತೆಷ್ಟು ನಿಜ. ಕುಂಟಪ್ಪನ ಕೈಲಿದ್ದ ದುಡ್ಡು ಖಾಲಿಯಾಗಿತ್ತು. ಅವರಿವರ ಹತ್ತಿರ
ಸಾಲ ಮಾಡಿ ಸೇಂದಿ ಏರಿಸಿ ಒಂದಷ್ಟು ದಿನ ಕಳೆದ. ಸಾಲವೂ ಹುಟ್ಟದಾದಾಗ, ಕುಂಟಪ್ಪನು
ಯೋಚಿಸಬೇಕಾಗಿ ಬಂತು. ಇದೆಲ್ಲದರ ಮಧ್ಯೆ ಕುಂಟಪ್ಪನಿಗೆ ಕಾಲಿನ ಕೊನೆಯಲ್ಲಿ ಕೆಟ್ಟದಾಗಿ
ವಾಸನೆ ಬಂದಂತಾಗಿ ಸಿಕ್ಕ ಸಿಕ್ಕ ಸೊಪ್ಪನ್ನೆಲ್ಲ ಅರೆದು ಹಚ್ಚುತ್ತಿದ್ದ.
ಯಾವುದರಿಂದಲೂ ವಾಸಿಯಾಗದಾದಾಗ ಕುಂಟಪ್ಪನಿಗೆ ಚಿಂತೆಗಿಟ್ಟುಕೊಂಡಿತು. ಅಷ್ಟು ದಿನ
ಮರೆತಿದ್ದ ಮಕ್ಕಳನ್ನು ತಟಕ್ಕನೆ ಜ್ಞಾಪಿಸಿಕೊಂಡು, ತನ್ನ ಜಮೀನು ಮಾರಿ ದುಡ್ಡು
ತಗಂಡು, ತನ್ನನ್ನು ಅಬ್ಬೇಪಾರಿಯಾಗಿಸಿ ಬಿಟ್ಟರೆಂದು, ತನ್ನ ಕಾಲಿಗೆ ಔಷದಿ ಮಾಡಿಸಲೂ
ತನ್ನಲ್ಲಿ ದುಡ್ಡಿಲ್ಲವೆಂದು ಬೈಯ್ಯ ತೊಡಗಿದ. ಅವರಿವರ ಕಿವಿಗೆ ಬಿದ್ದು ಅದು ಹೇಗೋ ಈ
ಮಾತುಗಳು ಅವನ ಮಕ್ಕಳ ಕಿವಿಯನ್ನೂ ತಲುಪಿತು. ಮಕ್ಕಳಿಬ್ಬರೂ ದೀರ್ಘ ಸಮಾಲೋಚನೆ ನಡೆಸ
ತೊಡಗಿದರು.

ತಾನೇ ಮಾವನ ಮನೆ ಸೇರಿಕೊಂಡಿದ್ದೇನೆ, ಅಪ್ಪನನ್ನು ಎಲ್ಲಿಟ್ಟುಕೊಳ್ಳಲಿ ಎಂದು ಮಗ
ತಗಾದೆ ತೆಗೆದ. ತನ್ನ ಗಂಡ ಒಪ್ಪಿದರೂ, ಮಗನಿದ್ದ ಮೇಲೆ ನಾನ್ಯಾಕೆ ಸಾಕಲಿ ಎಂದು ಮಗಳು
ಹಿಂತೆಗೆದಳು. ಜಗಳ ಬಗೆಹರೆಯದಾದಾಗ ಹಿರಿಯರೆನಿಸಿಕೊಂಡವರ ಮಧ್ಯಸ್ಥಿಕೆಯಲ್ಲಿ
ಕುಂಟಪ್ಪನು ಮಗಳ ಮನೆಯಲ್ಲಿ ಇರುವುದೆಂದೂ, ಮಗನು ಅಪ್ಪನ ದೇಕ್ ರೇಖಿಗೆ ತಿಂಗಳಾ
ಒಂದಷ್ಟು ಹಣ ಕೊಡುವುದೆಂದೂ ತೀರ್ಮಾನವಾಯಿತು. ಕುಂಟಪ್ಪನೂ ಇದಕ್ಕೆ ಒಪ್ಪಿದ. ತನ್ನ
ಹಳ್ಳಿಗೆ ಒಂದು ಸಲಾಮು ಹೊಡೆದು, ಮಗಳು ಮತ್ತು ಕೊಳೆಯುತ್ತಿದ್ದ ಕಾಲಿನ ಜೊತೆ
ಬೆಂಗಳೂರು ಬಸ್ಸನ್ನೇರಿದ.

ಮಗಳ ಮನೆ ಸುಸಜ್ಜಿತವಾಗಿತ್ತು. ಸ್ವಿಚ್ ಹಾಕಿದರೆ ಬಿಸಿ ನೀರು, ತಂಪಾಗಿಸಲು
ರೆಫ್ರಿಜರೇಟರು. ಬಟ್ಟೆ ಒಗೆಯಲು ಅದೆಂತದೋ ಮಶೀನು. ಮಲಗಲು ಮಂಚ, ನೋಡಲು ಟಿ.ವಿ.
ಕುಂಟಪ್ಪ ಖುಷಿಯಾಗಿ ಹೋದ. ಅವನಿಗೆ ಕಾಲಿನ ಗಾಯ ಮರೆತಂತೇ ಆಗಿತ್ತು. ಸ್ವಲ್ಪ ದಿನದ
ಮೇಲೆ ಮತ್ತೆ ಎಡಬಿಡದೇ ನೋವು ಕಾಡತೊಡಗಿದಾಗ, ಮಗಳು ಆತನನ್ನು ಆಸ್ಪತ್ರೆಗೆ
ಕರೆದುಕೊಂಡು ಹೋದಳು. ಆದರೆ ಅಷ್ಟ್ರರಲ್ಲಾಗಲೇ ಹಿಮ್ಮಡಿಯ ಮೇಲ್ಭಾಗದವರೆಗೂ ಕಾಲು
ಗ್ಯಾಂಗ್ರಿನ್ ಆಗಿ , ಕಾಲು ತೆಗೆಯದಿದ್ದರೇ ಅದು ಮೈಯೆಲ್ಲ ಹಬ್ಬುತ್ತದದೆಂದು ಡಾಕ್ಟರು
ಎಚ್ಚರಿಸಿದರು. ’ಏನಾದ್ರು ಆಗ್ಲಿ ನನ್ ಕಾಲು ಕತ್ತರಿಸಕ್ಕೆ ಬಿಡಲ್ಲ’ ಎಂದು ಕುಂಟಪ್ಪ
ಚೀರಾಡಿದರೆ, ಇದೆಲ್ಲಕ್ಕೂ ದುಡ್ಡೆಲ್ಲಿಂದ ಹೊಂಚುವುದೆಂದೂ ಮಗಳೂ ಮಗನೂ ತಲೆಮೇಲೆ ಕೈ
ಹೊತ್ತು ಕುಳಿತರು. ಮಗಳು ಸಣ್ಣದ್ದಕ್ಕೆಲ್ಲ ಸಿಡಿಮಿಡಿಗೊಳ್ಳ ತೊಡಗಿದರೆ. ಮಗ ದುಡ್ಡು
ಹೊಂಚಲು ಆಗುತ್ತಿರುವ ಕಷ್ಟವನ್ನೆಲ್ಲ ಹೇಳಿಕೊಂಡು ರೇಗುತ್ತಿದ್ದ. ಅಂತೂ ಕುಂಟಪ್ಪನ
ಕಾಲಿಗೆ ಆಪರೇಶನ್ ಆಗಿ, ಎಡಗಾಲು ಹಿಮ್ಮಡಿಯ ಮೇಲ್ಬಾಗದವರೆಗೆ ಇಲ್ಲವಾಯಿತು.
ಆಸ್ಪತ್ರೆಯವರು ಕೊಟ್ಟ ಕೋಲನ್ನು ಕಂಕುಳ ಕೆಳಗೆ ಇಟ್ಟುಕೊಂಡು ಓಡಿಯಾಡಲು ಕಲಿತ.
ಆಸ್ಪತ್ರೆ ಇಂದ ಮನೆಗೆ ಬಂದ ಮೇಲೆ ಮಗಳ ಸಿಡಿಮಿಡಿ ನಡೆದೇ ಇತ್ತು. ಕೇಳಿಸಿಕೊಳ್ಳದೆ
ಹೊರಗೆ ಹೋಗಲು, ಐದನೇ ಫ್ಲೋರಿನಲ್ಲಿದ್ದ ಮನೆಯಿಂದ ಕೆಳಗೆ ಇಳಿಯಲು ಕುಂಟಪ್ಪನ ಕೈಲಿ
ಅಲ್ಲಲ್ಲ ಕಾಲಲ್ಲಿ ಆಗುತ್ತಿರಲಿಲ್ಲ. ಕುಂಟಪ್ಪ ಅಂತರ್ಮುಖಿಯಾಗ ತೊಡಗಿದ್ದ. ಈಗೀಗ
ಅವನಿಗೆ ಎಲ್ಲವೂ ಬೇಸರವೆನಿಸುತ್ತಿತ್ತು. ಟೀವಿ ನೋಡದಾದ. ಹೊರಗೆ ಹೋಗಿಬರಲು ಮಕ್ಕಳ
ಮೊಮ್ಮಕ್ಕಳ ಸಹಾಯ ಕೇಳಿದರೆ ಅವರು ಸಿಟ್ಟು ಮಾಡಿಕೊಳ್ಳುತ್ತಿದ್ದರು. ಕುಂಟಪ್ಪನಿಗೆ
ಎಲ್ಲಿಯಾದರೂ ಓಡೇ ಹೋಗಬೇಕೆನಿಸುತ್ತಿತ್ತು. ರಾತ್ರಿಗಳಲ್ಲಿ ಎದ್ದು ಮನೆಯ ಹೊರಗೆ
ಗಸ್ತು ತಿರುಗ ತೊಡಗಿದ. ಏನೂ ಮಾಡಿದರೂ ಅವನ ತಳಮಳ ನಿಲ್ಲದಾಯಿತು.

ಅದೊಂದು ದಿನ ಮಗಳಿಗೆ ತನ್ನನ್ನು ಹಳ್ಳಿಗೆ ಕರೆದುಕೊಂಡು ಹೋಗಲು ದುಂಬಾಲು ಬಿದ್ದ.
ಸಿಟ್ಟುಗೊಂಡ ಮಗಳು ಆಗುವುದಿಲ್ಲವೆಂದು ಹೇಳಿದರೂ ಒತ್ತಾಯಿಸತೊಡಗಿದ, ಇವನ ಕಾಟ
ತಾಳಲಾರದೆಯೋ ಅಥವಾ ಕನಿಕರದಿಂದಲೋ ಅವನನ್ನು ಹಳ್ಳಿಗೆ ಕರೆದುಕೊಂಡು ಹೊರಟಳು. ಸುಮಾರು
೨ ವರ್ಷದ ಹಿಂದೆ ನೋಡಿದ್ದ ತನ್ನ ಹಳ್ಳಿಯನ್ನು ಮತ್ತೆ ನೋಡುತ್ತಲೇ ಕುಂಟಪ್ಪ
ಖುಷಿಗೊಂಡ. ತನ್ನ ಮನೆಯ ಸುತ್ತ ಮುತ್ತ ನಡೆದಾಡಿದ. ಮನೆಯ ಎದುರಿಗಿದ್ದ ತೆಂಗಿನ
ಮರವನ್ನು ನೇವರಿಸಿದ. ಹಸುಗಳನ್ನು ಕಂಡು ಮಾತಾಡಿಸಿದ. ಒಟ್ಟಿನಲ್ಲಿ ಅವನು
ಪ್ರಸನ್ನನಾಗಿದ್ದ. ಕತ್ತಲಾಗುತ್ತ ಬಂದಂತೆ ಮಗಳು ವಾಪಾಸ್ಸು ಹೊರಡಲು ಒತ್ತಾಯಿಸ
ತೊಡಗಿದಳು. ಕುಂಟಪ್ಪ ಏನು ಮಾಡಿದರೂ ಬರದಾದ. ಒಬ್ಬನೇ ಇಲ್ಲಿರುವುದು
ಕ್ಷೇಮವಲ್ಲವೆಂದೂ, ಅವನನ್ನು ನೋಡಿಕೊಳ್ಳಲು ಯಾರೂ ಅಲ್ಲಿಲ್ಲವೆಂದು ಹೇಳಿದರೂ
ಕುಂಟಪ್ಪನು ಮನ ಬದಲಿಸಲಿಲ್ಲ. ಬೇಸತ್ತ ಮಗಳು ಒಬ್ಬಳೇ ವಾಪಾಸ್ಸಾದಳು. ಬೇರಿಗೆ
ಅಂಟಿಕೊಂಡಿದ್ದ ಕುಂಟಪ್ಪನ ಮನಸ್ಸು ರೆಕ್ಕೆಗಳಿಗೆ ಹೊಂದಿಕೊಳ್ಳದಾಯಿತು. ಏನೇ ಆದರು
ಮತ್ತೆ ತನ್ನ ಹಳ್ಳಿ ಬಿಟ್ಟು ಹೋಗಬಾರದೆಂದು ತೀರ್ಮಾನಿಸಿದ.

ಅಂದಿನಿಂದ ಕುಂಟಪ್ಪ ಹಳ್ಳಿಯಲ್ಲೇ ಇದಾನೆ. ಇದಕ್ಕೂ ಮೊದಲು ಮಾನಣ್ಣ, ಮಾನೋಜಿ, ಮಾನಪ್ಪ
ನಾಗಿದ್ದವನು ಈಗ ಎಲ್ಲರ ಬಾಯಲ್ಲಿ ಕುಂಟಪ್ಪನಾಗಿದ್ದಾನೆ. ಮನೆಯಲ್ಲಿ ಸಹಾಯಕ್ಕೆ ಒಬ್ಬ
ಸಣ್ಣ ಹುಡುಗನನ್ನು ಇಟ್ಟುಕೊಂಡಿದ್ದಾನೆ. ಪಕ್ಕದ ಮನೆಯವರಿಗೆ ಮಾರಿಬಿಟ್ಟಿದ್ದ ತನ್ನ
ಹಸುಗಳನ್ನು ತಾನೇ ಸಾಕ ತೊಡಗಿದ್ದಾನೆ. ಆಗಾಗ ತನ್ನದಲ್ಲದ ಜಮೀನಿಗೆ ಹೋಗಿ
ಅಡ್ಡಾಡಿಕೊಂಡು ಬರುತ್ತಾನೆ.

5 Responses to “ಕತೆಯಾದ ಕುಂಟಪ್ಪ!”

  1. Gurumurthy Says:

    ಕುಂಟಪ್ಪನಂತೆ ಆಗಿದೆ ಅನೇಕ ಜನರ ಜೀವನ ಇಂದು
    ಕಥೆ ಚೆನ್ನಾಗಿದೆ,

  2. ಹರೀಶ ಆತ್ರೇಯ Says:

    ಆತ್ಮೀಯ
    ನಿರೂಪಣಾ ರೀತಿಯ ಕಥನ ಶೈಲಿ ಚೆನ್ನಾಗಿ ಮೂಡಿ ಬ೦ದಿದೆ.
    ಆದರೆ ಕಥೆಯ ತಿರುಳು ಸಾಧಾರಣ ಅನ್ನಿಸಿತು.ಮಾತು ಒರಟು ಎನಿಸಿದರೆ ಕ್ಷಮೆಯಿರಲಿ.
    ಬಡತನವನ್ನು ಅವನು ಜೀವನ ನಡೆಸಿದ ಶೈಲಿಯನ್ನು ಇನ್ನೂ ಹೇಳಬಹುದಿತ್ತು.ಕಾಲಿನ ಗಾಯವನ್ನು ಬಡತನದ ಪ್ರತೀಕವಾಗಿರಿಸಿದ್ದೀರಿ ಅದು ತು೦ಬಾ ಚೆನ್ನಾಗಿದೆ ಆದರೆ ಅದೇ ಪ್ರತೀಕವನ್ನು ವಿಸ್ತರಿಸಬಹುದಿತ್ತು ಕು೦ವೀ ರವರ ಬರಹಗಳನ್ನು ಓದಿದ್ದೀರೆ೦ದು ಭಾವಿಸುತ್ತೇನೆ.ಇಲ್ಲವಾದರೆ ಒಮ್ಮೆ, ದಯವಿಟ್ಟು ಓದಿ.
    ಅತೀ ಮಾತೆನಿಸಿದರೆ ಕ್ಷಮಿಸಿ
    ಹರೀಶ ಆತ್ರೇಯ

  3. Santhosh C Rao Says:

    Chennagide hema.. :)

  4. Dileep Hegde Says:

    ಕಥೆ ಚೆನ್ನಾಗಿದೆ..

  5. hemapowar123 Says:

    ಗುರುಮೂರ್ತಿಯವರೇ,
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

    ಹರೀಶ್ ಅತ್ರೇಯರೇ,
    ಕುಂವೀಯವರನ್ನು ನಾನು ಓದಿಲ್ಲ, ಓದುವೆ. ನಿಮ್ಮ ಸಲಹೆ ಮತ್ತು ಅಭಿಪ್ರಾಯಕ್ಕೆ ಧನ್ಯವಾದಗಳು.

    ಸಂತೋಷ್ ಮತ್ತು ದಿಲೀಪ್,
    ಮೆಚ್ಚಿದ್ದಕ್ಕೆ ಧನ್ಯವಾದಗಳು.

Leave a Reply