ಮದರ್ ತೆರೇಸಾ ಸೋಗುಗಾತಿ, ಕಪಟಿ, ಹಿಪೋಕ್ರಿಟ್ ಎಂದವನು ಓಶೋ!!!

November 30, 2009

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು. ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:

ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ. ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.

ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಈ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಈ ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?


೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ಆ ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ೧ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಈ ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗು ಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.

ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ಈ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಈ ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?

ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು.

ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ, ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್‌ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.


***

ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಆ ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು. ಆದರೆ ನಿಜ ವಿಷಯ ಬೇರೆಯದೆ ಇತ್ತು. ಆ ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ
ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ
ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.

ನಿಮಗೆ ಒಂದು ವಿಷಯ ತಿಳಿದಿರಲಿ ಆ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!

ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.

ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿ,
ಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.
ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ, ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.

ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಈ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ. ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.

ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ. ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಈ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಈ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.

ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.

ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಥರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!

ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ. ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!


ಕತೆಯಾದ ಕುಂಟಪ್ಪ!

November 5, 2009

ಕುಂಟಪ್ಪನ ಹೆಸರು ಕುಂಟಪ್ಪನಲ್ಲ!

ಈಗ್ಯೆ ಎರೆಡು ವರ್ಷದ ಕೆಳಗೆ ಕುಂಟಪ್ಪನನ್ನು ಯಾರೂ ಕುಂಟಪ್ಪನೆಂದು
ಕರೆಯುತ್ತಿರಲಿಲ್ಲ. ಕುಂಟಪ್ಪನ ನಿಜವಾದ ಹೆಸರು ಮನ್ನೋಜಿ ರಾವ್ ಎಂದು. ಅಕಸ್ಮಾತಾಗಿ
ಯಾರಾದರೂ ತನ್ನ ಹೆಸರು ಹಿಡಿದು ಕೂಗಿದರೆ ಕುಂಟಪ್ಪನು ತುಂಬಾ ಖುಷಿಗೊಳ್ಳುತ್ತಾನೆ.
ಎರೆಡು ವರ್ಷದ ಹಿಂದೆ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಕುಂಟಪ್ಪನನ್ನು ಹಳ್ಳಿಯೇನು
ಅಷ್ಟು ಆಸ್ಥೆಯಿಂದ ಜ್ಞಾಪಿಸಿಕೊಳ್ಳುತ್ತಿರಲಿಲ್ಲ. ತಿರುಗಿ ಬಂದ ಅವನಿಗೆ ಸಂಭ್ರಮದ
ಸ್ವಾಗತವನ್ನೂ ಕೋರಲಿಲ್ಲ. ಇಂಥಹ ಎಷ್ಟೊ ಕುಂಟಪ್ಪರನ್ನು ಒಳಗೊಂಡ ಹಳ್ಳಿ ತನ್ನ ಪಾಡಿಗೆ
ತಾನಿದೆ.

ಕುಂಟಪ್ಪನ ಹಿನ್ನೆಲೆಯೂ ಏನಷ್ಟು ರೋಚಕವಾಗಿಲ್ಲ. ಈ ಮೊದಲು ಕುಂಟಪ್ಪನಿಗೆ
ಹಳ್ಳಿಯಲ್ಲೊಂದಷ್ಟು ಜಮೀನಿತ್ತು. ಈಗಿಲ್ಲ. ಕುಂಟಪ್ಪ ಒಂದಲ್ಲ ಎರೆಡು ಮದುವೆ ಆಗಿದ್ದ.
ಈಗ ಒಬ್ಬ ಹೆಂಡತಿಯೂ ಜೊತೆಗಿಲ್ಲ. ದೊಡ್ಡವಳು ಸತ್ತ ವರ್ಷಕ್ಕೇ ಇನ್ನೊಂದು ಮದುವೆಯಾದ
ಕುಂಟಪ್ಪನ ಎರಡನೇ ಹೆಂಡತಿ ಬಲು ಘಾಟಿ ಹೆಂಗಸು. ಕುಂಟಪ್ಪನೇನು ಮುಗ್ಧನಲ್ಲ. ಏರು
ದನಿಯಲ್ಲಿ ಜಗಳವಾಡುತ್ತಿದ್ದ ಅವಳನ್ನು ಮೂಲೆಗೆ ಕೆಡವಿ ಸಿಕ್ಕಸಿಕ್ಕಿದ್ದರಲ್ಲೆಲ್ಲ
ಸರಿಯಾಗಿ ಇಕ್ಕುತ್ತಿದ್ದ. ಅವನ ಒದೆತ ತಾಳಲಾರದೆ ಅವಳು ಹಿಂದಿನ ರಸ್ತೆಯ ಮಾಸ್ತರ ಜೊತೆ
ಓಡಿ ಹೋದಳು. ಇಬ್ಬಿಬ್ಬರನ್ನು ಕಟ್ಟಿಕೊಂಡು ಒಬ್ಬಳನ್ನೂ ಬಾಳಿಸದೇ ಹೋದ ಎಂದು, ಮಾತಿಗೆ
ಏನೂ ಸಿಗದಾಗ ಜನ ಕುಂಟಪ್ಪನ ಬಗ್ಗೆ ಆಡಿಕೊಳ್ಳುವುದುಂಟು. ಕುಂಟಪ್ಪನಿರುವ ಆ ಹಳ್ಳಿ
ಬೆಂಗಳೂರಿಗೆ ತೀರ ಸಮೀಪದಲ್ಲಿದೆ. ಬಿ.ಡಿ.ಎ ಲೇ ಔಟ್ ಗಳನ್ನು ಮಾಡಲು ಸರ್ಕಾರವು ರೈತರ
ಜಮೀನನ್ನು ಖರೀದಿ ಮಾಡಿತು. ಕುಂಟಪ್ಪನಿಗೆ ಊಟಕ್ಕೆ, ಸಾರಾಯಿಗೆ ಏನೂ ತೊಂದರೆ
ಇರಲಿಲ್ಲ. ಇದ್ದ ಜಮೀನಿನಲ್ಲಿ ಬೆಳೆದು, ವರ್ಷಕ್ಕಾಗುವಷ್ಟು ಇಟ್ಟುಕೊಂಡು
ಮಿಕ್ಕಿದ್ದನ್ನು ಮಾರಿ ಹೇಗೋ ಕಾಲ ತಳ್ಳುತ್ತಿದ್ದ. ಜಮೀನು ಮಾರಬೇಕಾದ ದರ್ದು ಖಂಡಿತ
ಅವನಿಗೆ ಇರಲಿಲ್ಲ. ಅವನು ಜಮೀನು ಮಾರಿದ್ದಕ್ಕೂ ಒಂದು ಹಿನ್ನಲೆಯಿದೆ.

ಕುಂಟಪ್ಪನಿಗೆ ಮಕ್ಕಳಿದ್ದಾರೆ. ಎರಡನೆ ಹೆಂಡತಿಯ ಮಕ್ಕಳು. ಮೊದಲನೆ ಹೆಂಡತಿಗೂ
ಮಕ್ಕಳಿದ್ದುವೇನೋ, ಅವರ ಬಗ್ಗೆ ಗೊತ್ತಿಲ್ಲ. ಈ ಎರಡನೆ ಹೆಂಡತಿ, ಮಾಸ್ತರ ಜೊತೆಗೆ ಓಡಿ
ಹೋಗುವ ಮೊದಲು ಇದ್ದ ಎರಡು ಮಕ್ಕಳನ್ನು ’ಹುಟ್ಟಿಸಿಲ್ವ ನೀನೇ ಸಾಕ್ಕೋ’ ಅಂತಂದು
ಕುಂಟಪ್ಪನ ಹತ್ತಿರವೇ ಬಿಟ್ಟು ಹೋಗಿದ್ದಳು. ತನ್ನ ಊಟಕ್ಕೆ ಪರದಾಡುತ್ತಿದ್ದ ಕುಂಟಪ್ಪ,
ಹಳ್ಳಿಯಲ್ಲಿ ಅವರಿಬ್ಬರನ್ನೂ ಸಾಕಲಾರದೆ, ಎರಡನೆ ಹೆಂಡತಿ ತಾಯಿಯ ಮನೆಗೆ ಅವನ್ನು
ಬಿಟ್ಟು ಬಂದಿದ್ದ. ಓಡಿಹೋದವಳ ಮಕ್ಕಳೆಂದು ಅವಕ್ಕೂ ಅಲ್ಲಿ ಸಿಕ್ಕ ಮರ್ಯಾದೆ
ಅಷ್ಟರಲ್ಲೇ ಇತ್ತು. ಚೆನ್ನಾಗಿ ಸಾಕುತ್ತಿಲ್ಲವೆಂದೂ ತಿಳಿದರೂ, ಅವರನ್ನು ಮನೆಗೆ ತಂದು
ಆರೈಕೆ ಮಾಡಲು ಚೈತನ್ಯವಿಲ್ಲದ ಅಸಹಾಯಕನಾಗಿದ್ದ ಕುಂಟಪ್ಪ ಆಗಾಗ ಹೋಗಿ ಮಕ್ಕಳನ್ನು
ನೋಡಿಕೊಂಡು, ಓಡಿ ಹೋದ ಹೆಂಡತಿಗೆ ಹಿಡಿ ಶಾಪ ಹಾಕಿ ಬರುತ್ತಿದ್ದ. ಇಬ್ಬರು ಮಕ್ಕಳೂ
ಬೆಳೆದು ಮದುವೆಯಾಗಿ ಈಗ ಇಬ್ಬಿಬ್ಬರು ಮಕ್ಕಳಿಗೆ ಪೋಷಕರಾಗಿದ್ದಾರೆ. ಆಟೋ
ಓಡಿಸಿಕೊಂಡಿದ್ದ ಅನುಭವದಿಂದಲೇ ಎಂಬಂತೆ ತಮಿಳು ಹುಡುಗಿಯನ್ನು ಓಡಿಸಿಕೊಂಡು ಹೋಗಿ
ಮದುವೆಯಾಗಿ, ಮಾವನ ಆಸ್ತಿಯ ಒಡೆಯನಾಗಿ ನೆಮ್ಮದಿಯಿಂದಿರುವವನು ಕುಂಟಪ್ಪನ ಹಿರಿಮಗ.
ಬಡತನದಲ್ಲೇ ಹುಟ್ಟಿ, ಮೂದಲಿಕೆಯಲ್ಲೇ ಬೆಳೆದು, ಅವರಿವರ ನೆರವಿನಿಂದ ಮದುವೆಯಾದ
ಹೆಣ್ಣುಮಗಳು ಮತ್ತು ಇಬ್ಬರು ಮಕ್ಕಳ ಅಮ್ಮ ಕುಂಟಪ್ಪನ ಎರಡನೆಯ ಸಂತಾನ. ಅಪ್ಪ-ಮಗ-ಮಗಳು
ಇವರಲ್ಲಿ ಸ್ವಾಭಾವಿಕವಾಗಿ ಇರಬೇಕಿದ್ದ ಪ್ರೀತಿ ಅವರಲ್ಲಿ ಇರಲಿಲ್ಲವೆನ್ನುವುದಕ್ಕಿಂತ
ಕಡಿಮೆ ಇತ್ತು ಎಂದರೆ ಸರಿಯೇನೋ.

ಕುಂಟಪ್ಪನ ಬಳಿ ಇದ್ದ ಜಮೀನು ಪಿತ್ರಾರ್ಜಿತವಾದ್ದರಿಂದ ಸಧ್ಯಕ್ಕೆ ಇದ್ದ ಇಬ್ಬರೂ
ಮಕ್ಕಳಿಗೂ ಅದರಲ್ಲಿ ಹಕ್ಕಿತ್ತು. ಬಿ.ಡಿ.ಎ. ಲೇ ಔಟುಗಳಾಗ ತೊಡಗಿ ಸರ್ಕಾರವು ಜಮೀನಿನ
ಖರೀದಿಗೆ ಒತ್ತಾಯಿಸಿದಾಗ, ಬೆಂಗಳೂರಿನಲ್ಲಿ ಇದ್ದುದ್ದರಲ್ಲೇ ಸಂಸಾರ ಮಾಡಿಕೊಂಡಿದ್ದ
ಕುಂಟಪ್ಪನ ಮಕ್ಕಳು, ಕುಂಟಪ್ಪನು ಸುತಾರಾಂ ಬೇಡವೆಂದರೂ ಕೇಳದೆ ಒಳ್ಳೆಯ ಬೆಲೆಗೆ
ಜಮೀನನ್ನು ಮಾರಿಬಿಟ್ಟರು. ಬಂದ ಹಣದಲ್ಲಿ ಸೈಟು ಮನೆ ಎಲ್ಲಾ ಖರೀದಿಸಲು ಆಗದೆ ಹೋದರೂ,
ಹಾಲಿ ಇದ್ದುದ್ದಕ್ಕಿಂತ ಅವರ ಜೀವನ ಉತ್ತಮ ಮಟ್ಟದ್ದಾಯಿತು. ಆದರೆ ಕುಂಟಪ್ಪನಿಗೆ
ಪೀಕಲಾಟಕ್ಕಿಟ್ಟುಕೊಂಡಿತು. ಜಮೀನಿಲ್ಲದೆ ಹಳ್ಳಿಯಲ್ಲಿ ತಾನು ಮಾಡುವುದೇನು ಎಂದು
ಜಮೀನು ಮಾರುವುದಕ್ಕೆ ಮುಂಚೆಯೇ ಮಕ್ಕಳಿಬ್ಬರಿಗೂ ಪ್ರಶ್ನಿಸಿದ್ದ, ಹೇಗಾದರೂ ಜಮೀನನ್ನು
ಮಾರಲೇ ಬೇಕೆಂದು ತೀರ್ಮಾನಿಸಿಕೊಂಡಿದ್ದ ಅವರಿಬ್ಬರೂ ’ನಾವಿಲ್ವ, ನಾವು ಸಾಕ್ತೀವಿ,
ನಮ್ಮನೇಲೆ ಬಂದಿರು’ ಎಂದು ಅವಸರಿಸಿ ಅವನ ಕೈಲಿ ಹೆಬ್ಬೆಟ್ಟೊತ್ತಿಸಿದ್ದರು. ಜಮೀನು
ಮಾರಿದ ಮೇಲೆ ಬಂದ ಹಣವನ್ನು ಹಂಚಿಕೊಂಡು, ಕುಂಟಪ್ಪನ ಕೈಲೊಂದಷ್ಟು ಹಣ ಇರುಕಿ ಹೋದ
ಮಕ್ಕಳು, ಮತ್ತವನ ಕಡೆ ತಿರುಗಿ ನೋಡಿರಲಿಲ್ಲ. ಕೈಲಿದ್ದ ಹಣ ಖಾಲಿಯಾಗುವವರೆಗೂ
ಕುಂಟಪ್ಪನಿಗೂ ಮಕ್ಕಳ ನೆನಪು ಬಂದಿರಲಿಲ್ಲ. ’ಕೂತು ಉಂಡರೆ ಕುಡಿಕೆ ಹೊನ್ನೂ ಸಾಲದು’
ಎಂಬ ಮಾತೆಷ್ಟು ನಿಜ. ಕುಂಟಪ್ಪನ ಕೈಲಿದ್ದ ದುಡ್ಡು ಖಾಲಿಯಾಗಿತ್ತು. ಅವರಿವರ ಹತ್ತಿರ
ಸಾಲ ಮಾಡಿ ಸೇಂದಿ ಏರಿಸಿ ಒಂದಷ್ಟು ದಿನ ಕಳೆದ. ಸಾಲವೂ ಹುಟ್ಟದಾದಾಗ, ಕುಂಟಪ್ಪನು
ಯೋಚಿಸಬೇಕಾಗಿ ಬಂತು. ಇದೆಲ್ಲದರ ಮಧ್ಯೆ ಕುಂಟಪ್ಪನಿಗೆ ಕಾಲಿನ ಕೊನೆಯಲ್ಲಿ ಕೆಟ್ಟದಾಗಿ
ವಾಸನೆ ಬಂದಂತಾಗಿ ಸಿಕ್ಕ ಸಿಕ್ಕ ಸೊಪ್ಪನ್ನೆಲ್ಲ ಅರೆದು ಹಚ್ಚುತ್ತಿದ್ದ.
ಯಾವುದರಿಂದಲೂ ವಾಸಿಯಾಗದಾದಾಗ ಕುಂಟಪ್ಪನಿಗೆ ಚಿಂತೆಗಿಟ್ಟುಕೊಂಡಿತು. ಅಷ್ಟು ದಿನ
ಮರೆತಿದ್ದ ಮಕ್ಕಳನ್ನು ತಟಕ್ಕನೆ ಜ್ಞಾಪಿಸಿಕೊಂಡು, ತನ್ನ ಜಮೀನು ಮಾರಿ ದುಡ್ಡು
ತಗಂಡು, ತನ್ನನ್ನು ಅಬ್ಬೇಪಾರಿಯಾಗಿಸಿ ಬಿಟ್ಟರೆಂದು, ತನ್ನ ಕಾಲಿಗೆ ಔಷದಿ ಮಾಡಿಸಲೂ
ತನ್ನಲ್ಲಿ ದುಡ್ಡಿಲ್ಲವೆಂದು ಬೈಯ್ಯ ತೊಡಗಿದ. ಅವರಿವರ ಕಿವಿಗೆ ಬಿದ್ದು ಅದು ಹೇಗೋ ಈ
ಮಾತುಗಳು ಅವನ ಮಕ್ಕಳ ಕಿವಿಯನ್ನೂ ತಲುಪಿತು. ಮಕ್ಕಳಿಬ್ಬರೂ ದೀರ್ಘ ಸಮಾಲೋಚನೆ ನಡೆಸ
ತೊಡಗಿದರು.

ತಾನೇ ಮಾವನ ಮನೆ ಸೇರಿಕೊಂಡಿದ್ದೇನೆ, ಅಪ್ಪನನ್ನು ಎಲ್ಲಿಟ್ಟುಕೊಳ್ಳಲಿ ಎಂದು ಮಗ
ತಗಾದೆ ತೆಗೆದ. ತನ್ನ ಗಂಡ ಒಪ್ಪಿದರೂ, ಮಗನಿದ್ದ ಮೇಲೆ ನಾನ್ಯಾಕೆ ಸಾಕಲಿ ಎಂದು ಮಗಳು
ಹಿಂತೆಗೆದಳು. ಜಗಳ ಬಗೆಹರೆಯದಾದಾಗ ಹಿರಿಯರೆನಿಸಿಕೊಂಡವರ ಮಧ್ಯಸ್ಥಿಕೆಯಲ್ಲಿ
ಕುಂಟಪ್ಪನು ಮಗಳ ಮನೆಯಲ್ಲಿ ಇರುವುದೆಂದೂ, ಮಗನು ಅಪ್ಪನ ದೇಕ್ ರೇಖಿಗೆ ತಿಂಗಳಾ
ಒಂದಷ್ಟು ಹಣ ಕೊಡುವುದೆಂದೂ ತೀರ್ಮಾನವಾಯಿತು. ಕುಂಟಪ್ಪನೂ ಇದಕ್ಕೆ ಒಪ್ಪಿದ. ತನ್ನ
ಹಳ್ಳಿಗೆ ಒಂದು ಸಲಾಮು ಹೊಡೆದು, ಮಗಳು ಮತ್ತು ಕೊಳೆಯುತ್ತಿದ್ದ ಕಾಲಿನ ಜೊತೆ
ಬೆಂಗಳೂರು ಬಸ್ಸನ್ನೇರಿದ.

ಮಗಳ ಮನೆ ಸುಸಜ್ಜಿತವಾಗಿತ್ತು. ಸ್ವಿಚ್ ಹಾಕಿದರೆ ಬಿಸಿ ನೀರು, ತಂಪಾಗಿಸಲು
ರೆಫ್ರಿಜರೇಟರು. ಬಟ್ಟೆ ಒಗೆಯಲು ಅದೆಂತದೋ ಮಶೀನು. ಮಲಗಲು ಮಂಚ, ನೋಡಲು ಟಿ.ವಿ.
ಕುಂಟಪ್ಪ ಖುಷಿಯಾಗಿ ಹೋದ. ಅವನಿಗೆ ಕಾಲಿನ ಗಾಯ ಮರೆತಂತೇ ಆಗಿತ್ತು. ಸ್ವಲ್ಪ ದಿನದ
ಮೇಲೆ ಮತ್ತೆ ಎಡಬಿಡದೇ ನೋವು ಕಾಡತೊಡಗಿದಾಗ, ಮಗಳು ಆತನನ್ನು ಆಸ್ಪತ್ರೆಗೆ
ಕರೆದುಕೊಂಡು ಹೋದಳು. ಆದರೆ ಅಷ್ಟ್ರರಲ್ಲಾಗಲೇ ಹಿಮ್ಮಡಿಯ ಮೇಲ್ಭಾಗದವರೆಗೂ ಕಾಲು
ಗ್ಯಾಂಗ್ರಿನ್ ಆಗಿ , ಕಾಲು ತೆಗೆಯದಿದ್ದರೇ ಅದು ಮೈಯೆಲ್ಲ ಹಬ್ಬುತ್ತದದೆಂದು ಡಾಕ್ಟರು
ಎಚ್ಚರಿಸಿದರು. ’ಏನಾದ್ರು ಆಗ್ಲಿ ನನ್ ಕಾಲು ಕತ್ತರಿಸಕ್ಕೆ ಬಿಡಲ್ಲ’ ಎಂದು ಕುಂಟಪ್ಪ
ಚೀರಾಡಿದರೆ, ಇದೆಲ್ಲಕ್ಕೂ ದುಡ್ಡೆಲ್ಲಿಂದ ಹೊಂಚುವುದೆಂದೂ ಮಗಳೂ ಮಗನೂ ತಲೆಮೇಲೆ ಕೈ
ಹೊತ್ತು ಕುಳಿತರು. ಮಗಳು ಸಣ್ಣದ್ದಕ್ಕೆಲ್ಲ ಸಿಡಿಮಿಡಿಗೊಳ್ಳ ತೊಡಗಿದರೆ. ಮಗ ದುಡ್ಡು
ಹೊಂಚಲು ಆಗುತ್ತಿರುವ ಕಷ್ಟವನ್ನೆಲ್ಲ ಹೇಳಿಕೊಂಡು ರೇಗುತ್ತಿದ್ದ. ಅಂತೂ ಕುಂಟಪ್ಪನ
ಕಾಲಿಗೆ ಆಪರೇಶನ್ ಆಗಿ, ಎಡಗಾಲು ಹಿಮ್ಮಡಿಯ ಮೇಲ್ಬಾಗದವರೆಗೆ ಇಲ್ಲವಾಯಿತು.
ಆಸ್ಪತ್ರೆಯವರು ಕೊಟ್ಟ ಕೋಲನ್ನು ಕಂಕುಳ ಕೆಳಗೆ ಇಟ್ಟುಕೊಂಡು ಓಡಿಯಾಡಲು ಕಲಿತ.
ಆಸ್ಪತ್ರೆ ಇಂದ ಮನೆಗೆ ಬಂದ ಮೇಲೆ ಮಗಳ ಸಿಡಿಮಿಡಿ ನಡೆದೇ ಇತ್ತು. ಕೇಳಿಸಿಕೊಳ್ಳದೆ
ಹೊರಗೆ ಹೋಗಲು, ಐದನೇ ಫ್ಲೋರಿನಲ್ಲಿದ್ದ ಮನೆಯಿಂದ ಕೆಳಗೆ ಇಳಿಯಲು ಕುಂಟಪ್ಪನ ಕೈಲಿ
ಅಲ್ಲಲ್ಲ ಕಾಲಲ್ಲಿ ಆಗುತ್ತಿರಲಿಲ್ಲ. ಕುಂಟಪ್ಪ ಅಂತರ್ಮುಖಿಯಾಗ ತೊಡಗಿದ್ದ. ಈಗೀಗ
ಅವನಿಗೆ ಎಲ್ಲವೂ ಬೇಸರವೆನಿಸುತ್ತಿತ್ತು. ಟೀವಿ ನೋಡದಾದ. ಹೊರಗೆ ಹೋಗಿಬರಲು ಮಕ್ಕಳ
ಮೊಮ್ಮಕ್ಕಳ ಸಹಾಯ ಕೇಳಿದರೆ ಅವರು ಸಿಟ್ಟು ಮಾಡಿಕೊಳ್ಳುತ್ತಿದ್ದರು. ಕುಂಟಪ್ಪನಿಗೆ
ಎಲ್ಲಿಯಾದರೂ ಓಡೇ ಹೋಗಬೇಕೆನಿಸುತ್ತಿತ್ತು. ರಾತ್ರಿಗಳಲ್ಲಿ ಎದ್ದು ಮನೆಯ ಹೊರಗೆ
ಗಸ್ತು ತಿರುಗ ತೊಡಗಿದ. ಏನೂ ಮಾಡಿದರೂ ಅವನ ತಳಮಳ ನಿಲ್ಲದಾಯಿತು.

ಅದೊಂದು ದಿನ ಮಗಳಿಗೆ ತನ್ನನ್ನು ಹಳ್ಳಿಗೆ ಕರೆದುಕೊಂಡು ಹೋಗಲು ದುಂಬಾಲು ಬಿದ್ದ.
ಸಿಟ್ಟುಗೊಂಡ ಮಗಳು ಆಗುವುದಿಲ್ಲವೆಂದು ಹೇಳಿದರೂ ಒತ್ತಾಯಿಸತೊಡಗಿದ, ಇವನ ಕಾಟ
ತಾಳಲಾರದೆಯೋ ಅಥವಾ ಕನಿಕರದಿಂದಲೋ ಅವನನ್ನು ಹಳ್ಳಿಗೆ ಕರೆದುಕೊಂಡು ಹೊರಟಳು. ಸುಮಾರು
೨ ವರ್ಷದ ಹಿಂದೆ ನೋಡಿದ್ದ ತನ್ನ ಹಳ್ಳಿಯನ್ನು ಮತ್ತೆ ನೋಡುತ್ತಲೇ ಕುಂಟಪ್ಪ
ಖುಷಿಗೊಂಡ. ತನ್ನ ಮನೆಯ ಸುತ್ತ ಮುತ್ತ ನಡೆದಾಡಿದ. ಮನೆಯ ಎದುರಿಗಿದ್ದ ತೆಂಗಿನ
ಮರವನ್ನು ನೇವರಿಸಿದ. ಹಸುಗಳನ್ನು ಕಂಡು ಮಾತಾಡಿಸಿದ. ಒಟ್ಟಿನಲ್ಲಿ ಅವನು
ಪ್ರಸನ್ನನಾಗಿದ್ದ. ಕತ್ತಲಾಗುತ್ತ ಬಂದಂತೆ ಮಗಳು ವಾಪಾಸ್ಸು ಹೊರಡಲು ಒತ್ತಾಯಿಸ
ತೊಡಗಿದಳು. ಕುಂಟಪ್ಪ ಏನು ಮಾಡಿದರೂ ಬರದಾದ. ಒಬ್ಬನೇ ಇಲ್ಲಿರುವುದು
ಕ್ಷೇಮವಲ್ಲವೆಂದೂ, ಅವನನ್ನು ನೋಡಿಕೊಳ್ಳಲು ಯಾರೂ ಅಲ್ಲಿಲ್ಲವೆಂದು ಹೇಳಿದರೂ
ಕುಂಟಪ್ಪನು ಮನ ಬದಲಿಸಲಿಲ್ಲ. ಬೇಸತ್ತ ಮಗಳು ಒಬ್ಬಳೇ ವಾಪಾಸ್ಸಾದಳು. ಬೇರಿಗೆ
ಅಂಟಿಕೊಂಡಿದ್ದ ಕುಂಟಪ್ಪನ ಮನಸ್ಸು ರೆಕ್ಕೆಗಳಿಗೆ ಹೊಂದಿಕೊಳ್ಳದಾಯಿತು. ಏನೇ ಆದರು
ಮತ್ತೆ ತನ್ನ ಹಳ್ಳಿ ಬಿಟ್ಟು ಹೋಗಬಾರದೆಂದು ತೀರ್ಮಾನಿಸಿದ.

ಅಂದಿನಿಂದ ಕುಂಟಪ್ಪ ಹಳ್ಳಿಯಲ್ಲೇ ಇದಾನೆ. ಇದಕ್ಕೂ ಮೊದಲು ಮಾನಣ್ಣ, ಮಾನೋಜಿ, ಮಾನಪ್ಪ
ನಾಗಿದ್ದವನು ಈಗ ಎಲ್ಲರ ಬಾಯಲ್ಲಿ ಕುಂಟಪ್ಪನಾಗಿದ್ದಾನೆ. ಮನೆಯಲ್ಲಿ ಸಹಾಯಕ್ಕೆ ಒಬ್ಬ
ಸಣ್ಣ ಹುಡುಗನನ್ನು ಇಟ್ಟುಕೊಂಡಿದ್ದಾನೆ. ಪಕ್ಕದ ಮನೆಯವರಿಗೆ ಮಾರಿಬಿಟ್ಟಿದ್ದ ತನ್ನ
ಹಸುಗಳನ್ನು ತಾನೇ ಸಾಕ ತೊಡಗಿದ್ದಾನೆ. ಆಗಾಗ ತನ್ನದಲ್ಲದ ಜಮೀನಿಗೆ ಹೋಗಿ
ಅಡ್ಡಾಡಿಕೊಂಡು ಬರುತ್ತಾನೆ.