ಕಹಿ-ಬರಹ

December 30, 2008

aa034288

ಬ್ಲಾಗು ಶುರು ಮಾಡಿದ ಸ್ವಲ್ಪದಿನಕ್ಕೆ ಬರವಣಿಗೆ ಎಷ್ಟು ಕಷ್ಟದ ಕೆಲಸ ಅನ್ನಿಸ ಹತ್ತಿದೆ. ಏನಾದ್ರೂ ಬರೆಯಬೇಕು, ಬರೆಯಲೇಬೇಕು ಅಂತ ಅಂದುಕೊಂಡರೆ ಏನು ಹೊಳಿಯೋದೆ ಇಲ್ಲ. ಇಷ್ಟು ದಿನ ಬರೆಯದೆ ಇರಲು ಅದೇ ಕಾರಣವಾ? ಗೊತ್ತಿಲ್ಲ. ಈಗೊಂದು ತಿಂಗಳಲ್ಲಿ ಎಷ್ಟೊಂದು ಘಟನೆಗಳು ನಡೆದು ಹೋದ್ವು. ಭಾರತದ ಹೃದಯದಂತಿದ್ದ ಮುಂಬಯಿಗೆ ಉಗ್ರರು ಬಂದು ಬೆಂಕಿ ಇಟ್ಟು ಹೋಗಿದ್ದಾರೆ. ಬ್ಲಾಗಿನ ಬುದ್ದಿಜೀವಿಗಳೆಲ್ಲಾ ಅದರ ಬಗ್ಗೆ ಚರ್ಚಿಸಿದ್ದಾರೆ, ಬರಿಯಬೇಕೆಂದು ಯೋಚಿಸಿದರೂ ಕಾರಣವಿಲ್ಲದೇ ಸತ್ತ ಅಮಾಯಕರ ನೆನಪಿಗೆ ಕಣ್ಣಲ್ಲಿ ಮೂಡುವ ಒಂದು ಹನಿ ಬಿಟ್ಟರೆ ನನಗೆ ಬೇರೇನೂ ಹೊಳಿಯಲಿಲ್ಲ. ಯಾಕೋ ಅಂತರಂಗ ಖಾಲಿಯಾದ ಅನುಭವ. ಈ ಬರವಣಿಗೆ ಓದು ಎಲ್ಲ ಯಾರಿಗಾಗಿ ಯಾವುದಕ್ಕಾಗಿ ಅನಿಸಿಬಿಡುವಷ್ಟು ಖಿನ್ನತೆ.

ಏನನ್ನೋ ಕಳೆದುಕೊಳ್ಳುತ್ತಿರುವಂತೆ, ತಳವೇ ಇಲ್ಲದ ಯಾವುದೋ ಪ್ರಪಾತಕ್ಕೆ ಬೀಳುತ್ತಿರುವಂತೆ, ಹೀಗೆ ಏನೇನೋ ಹುಚ್ಚುಚ್ಚು ಕಲ್ಪನೆಗಳು. ಕಾರಣವಿಲ್ಲದ ಆತಂಕ. ಬುದ್ದಿಗೇನೋ ಮಂಕು ಕವಿದಂತೆ, ಇನ್ನು ಮುಂದೆ ಅದು ಏನನ್ನು ಯೋಚಿಸಲಾರದೇನೋ ಎಂದು ವಿನಾಕಾರಣ ಕಳವಳಕ್ಕೊಳಗಾಗಿಬಿಡುತ್ತೇನೆ. ಯಾರನ್ನಾದ್ರೂ ಹಿಡ್ಕೊಂಡು ಚೆನ್ನಾಗಿ ಹೊಡಿಯಬೇಕು, ರೋಡಲ್ಲಿ ನಿಂತುಕೊಂಡು ಜೋರಾಗಿ ಕಿರುಚಬೇಕು, ಯಾರಿಗಾದ್ರೂ ಹೀನಾಮಾನವಾಗಿ ಬೈದುಕೊಳ್ಳಬೇಕು, ಶರಪಂಜರದಲ್ಲಿ ಕಲ್ಪನ ಮಾಡ್ತಾಳಲ್ಲ ಹಾಗೇ ಸೋಫಾನ ಕಚ್ಚಿ ಕಚ್ಚಿ ಹರ್ದಾಕ್ಬೇಕು!! ಏನನ್ನಾದರೂ ಬರೆಯಬೇಕೆಂದುಕೊಂಡಾಗ, ನಾನಂದುಕೊಂಡದ್ದು ಬರೆಯಲಿಕ್ಕೆ ಸಾಧ್ಯವಾಗದಾಗ ನನಗೆ ಹೀಗೆಲ್ಲ ಅನ್ನಿಸುವುದುಂಟು!!! ಹುಚ್ಚರಿಗೆ ಹುಚ್ಚಿಡಿಯೋಕು ಮುಂಚೆ ಹೀಗೇ ಆಗುತ್ತದೇನೋ? ಏನನ್ನಾದರೂ ಓದುವಾಗ, ನೋಡಿದಾಗ, ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಯಾವುದೋ ಎಳೆ ಸಿಕ್ಕಂತಾಗಿ ಬರೆಯಬೇಕಂಬ ಭಾವ ದಟ್ಟವಾಗಿ ಕಾಡುತ್ತದೆ, ಬರೆಯಲು ಕೂತಾಗ ಕಾಡಿದ ಭಾವಗಳೆಲ್ಲಾ ನನ್ನವಲ್ಲವೆಂಬಂತೆ ಮಾಯವಾಗಿಬಿಟ್ಟಿರುತ್ತವೆ.

ದಿನಕ್ಕೆ ನೂರರ ಲೆಕ್ಕದಲ್ಲಿ ಹೆಚ್ಚುತ್ತಿರುವ ಬ್ಲಾಗುಗಳು, ಸಹ ಬ್ಲಾಗಿಗರ ಆಸಕ್ತಿ ಮೂಡಿಸುವ ಬರಹಗಳು, ಒಬ್ಬರಿಗೊಬ್ಬರು ಹೊಟ್ಟೆ ಕಿಚ್ಚಿಡಿಸುವ ಕವಿತೆಗಳು, ಇವನ್ನೆಲ್ಲ ನೋಡುತ್ತಿದ್ದರೆ, ಅರೆ! ಇವರಿಗೆಲ್ಲ ಸಾಧ್ಯಾವಾಗುವಂತದ್ದು ನನಿಗ್ಯಾಕೆ ಆಗೋಲ್ಲ ಎಂದು ಅಚ್ಚರಿಪಡುತ್ತೇನೆ. ಬರವಣಿಗೆಗೆ ಬೇಕಾಗೋ ಮಾನಸಿಕ ಸಿದ್ದತೆ ನಾನು ಮಾಡಿಕೊಂಡಿರುವುಲ್ಲವ? ಏನು ಬರೆಯಬೇಕೆಂದಿದ್ದೇನೆ ಎಂಬುದರ ಸ್ಪಷ್ಟ ಚಿತ್ರಣ ನನ್ನ ಮನಸ್ಸಿಗೆ ಬಂದಿರುವುದಿಲ್ಲವ? ಗೊತ್ತಿಲ್ಲ. ತುಂಬಾ ಸಲ ಏನನ್ನೋ ಬರೆಯ ಹೋಗಿ ಮತ್ತೇನನ್ನೋ ಬರೆದು ಅದನ್ನು ಬದಲಿಸಲು ಮನಸ್ಸಾಗದೆ ತಲೆಕೆರೆದುಕೊಂಡು ಸುಮ್ಮನಾಗಿದ್ದೀನಿ. ದೇವಸ್ಥಾನಕ್ಕೆ ಹೋಗಿ ದೇವರನ್ನೇ ನೋಡದೆ ಬರಿಯ ಗರಡುಗಂಬಕ್ಕೆ ನಮಸ್ಕಾರ ಮಾಡಿ ಮರಳಿಬಂದಂತೆ! ನನ್ನ ಭಾವನೆಗಳನ್ನು ಸ್ಪಷ್ಟವಾಗಿ ನನ್ನ ಬರವಣಿಗೆಯಲ್ಲಿ ಮೂಡಿಸುವುದು ನನಗೆ ಸಾಧ್ಯವೇ ಆಗಿಲ್ಲ. ಇಷ್ಟು ದಿನ ನಾನು ಬರೆದಿರೋದು ಹೆಚ್ಚಿಲ್ಲವಾದರೂ, ಅವು ನನಗೆ ತೃಪ್ತಿ ನೀಡಿಲ್ಲ. ‘ಹ್ಜ್ಞಾಂ ಇದು ಸರಿ, this is perfect ಇದನ್ನೇ ಬರೆಯಬೇಕೆಂದುಕೊಂಡದ್ದು ನಾನು’ ಎಂದು ಇದೂವರೆಗೂ ನನಗನ್ನಿಸಿಲ್ಲ. ಇದು ನನ್ನ ಬರಹದೆಡೆಗೆ ನನಗೇ ಇರುವ ಕೀಳರಿಮೆಯ? ಗೊತ್ತಿಲ್ಲ. “ಬರವಣಿಗೆ, ನನ್ನ ಭಾವನೆಗಳನ್ನು ಹರಿಬಿಡಲು ನಾನು ಹುಡುಕಿಕೊಂಡ ದಾರಿಯಷ್ಟೆ!?” ಊಹ್ಞೂಂ ಭಾವನೆಗಳ ರಭಸಕ್ಕೆ ನನ್ನ ಬರವಣಿಗೆ ಸಹಕರಿಸುತ್ತಿಲ್ಲ. ನನಗೆ ಬರೆಯಲಾಗುತ್ತಿಲ್ಲ. :(


ಹೇಗಿರಬೇಕು ನನ್ನವನು

December 18, 2008

image023

ನನ್ನವನು ಬಿಳಿ ಕುದುರೆಯೇರಿ ಬರುವ
ರಾಜಕುಮಾರನಾಗಿರಬೇಕೆಂದೇನಿಲ್ಲ,
ನನ್ನಲ್ಲಿ ಕನಸ ಬಿತ್ತುವ
ರೈತನಾದರೆ ಸಾಕು.

ನನ್ನನ್ನು ಅವನು ರತಿ ಮೇನಕೆ ಎಂದು
ಹೊಗಳಬೇಕಿಲ್ಲ, ನನ್ನತನಕೆ ಬೆಲೆಕೊಟ್ಟರೆ ಸಾಕು.
ನನ್ನ ಕಣ್ಣುಗಳನ್ನು ಕಮಲ, ಮೀನಿಗೆ ಹೋಲಿಸಬೇಕಿಲ್ಲ,
ನಾ ಮಲಗಿದ್ದಾಗ ಅವಕ್ಕೆ ಮುತ್ತಿಟ್ಟರೆ ಸಾಕು.

ನನ್ನವನು ಸುರಸುಂದರಾಂಗನಾಗಿರಬೇಕೆಂದೇನಿಲ್ಲ,
ಮನಸ್ಸಲ್ಲಿ ಕುರೂಪವಿಲ್ಲದಿದ್ದರೆ ಸಾಕು.

ಅವನು ಒಡವೆ ವಜ್ರಗಳ ಮಳೆಗರೆಯ ಬೇಕಾಗಿಲ್ಲ
ಆಭರಣವಿಲ್ಲದೆಯೂ ನನ್ನ ಮೆಚ್ಚಿದರೆ ಸಾಕು.

ಅವನ ಮಾತು ಮೋಡಿ ಮಾಡಬೇಕೆಂದೇನಿಲ್ಲ,
ಅದರಲ್ಲಿ ಸತ್ಯವಿದ್ದರೆ ಸಾಕು.
ಅವನು ಬಿಳಿ ಕೆನೆಹಾಲಿನಂತಿರಬೇಕೆಂದೇನಿಲ್ಲ,
ಕಪ್ಪಗಿದ್ದರೂ ಕಂಪ ಬೀರುವ ಕಸ್ತೂರಿಯಂತಿದ್ದರೆ ಸಾಕು.

ನನ್ನವನ ಪ್ರೀತಿ ಸಮುದ್ರದಷ್ಟು ಅಗಾಧವಿರಬೇಕೆಂದೇನಿಲ್ಲ,
ನನ್ನೀ ಮುಷ್ಟಿಗಾತ್ರದ ಹೃದಯ ತುಂಬುವಷ್ಟು ಪ್ರೀತಿಸಿದರೆ ಸಾಕು.