ವಿವೇಕಾನಂದರು ನಮಗೆಷ್ಟು ಗೊತ್ತು?

ಈಗಾಗಲೇ ಕಾಂಟ್ರಾವರ್ಷಿಯಲ್ ನ ಉತ್ತುಂಗದಲ್ಲಿರುವ ವಿವೇಕಾನಂದರ ಬಗ್ಗೆ ಅವಹೇಳನಕಾರಿಯಾಗಿ ಹೇಳಲಾಗಿದೆ ಎನ್ನಲಾದ ದಿನೇಶ್ ಅಮಿನ್ ಮಟ್ಟುರವರ ಲೇಖನದ ರೆಫರೆನ್ಸ್ ಇಟ್ಟುಕೊಂಡೇ ಬರೆಯುತ್ತಿದ್ದೇನೆ. ಶಾಲೆಯ ದಿನಗಳಲ್ಲಿ ನನಗೆ ವಿವೇಕಾನಂದರು ಅಮೇರಿಕಾದಲ್ಲಿ ಭಾಷಣ ಮಾಡಿದವರು, ಹೊರದೇಶದಲ್ಲಿ ಭಾರತದ ಬಗ್ಗೆ ಮಾತನಾಡಿ ಮನ್ನಣೆ ಪಡೆದವರು ಎಂಬಂತಹ ಬೇಸಿಕ್ ಮಾಹಿತಿಗಳನ್ನು ಬಿಟ್ಟರೆ ಹೆಚ್ಚೇನು ತಿಳಿದಿರಲಿಲ್ಲ. ಕಾಲೇಜಿನ ದಿನಗಳಲ್ಲಿ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ, ಬಡವರ ಬಗ್ಗೆ ಅತೀವ ಕಾಳಜಿ ತೋರಿಸುತ್ತಿದ್ದ ಅವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದರೂ ಕಿಟಕಿಯಿಂದ ಕೈಗೆ ಸಿಕ್ಕಿದ್ದನ್ನು ಬಿಕ್ಷುಕರಿಗೆ ದಾನ ಮಾಡಿಬಿಡುತ್ತಿದ್ದರು ಎಂದೆಲ್ಲಾ ಉರು ಹಚ್ಚಿ ಭಾಷಣಗಳಲ್ಲಿ ಒಪ್ಪಿಸುತ್ತಿದ್ದದ್ದೇ ಹೊರತು ಒಬ್ಬ ವ್ಯಕ್ತಿಯಾಗಿ, ಸಾಧಕರಾಗಿ, ಅದೆಷ್ಟೋ ಜನರಿಗೆ ಪ್ರೇರಕ ಶಕ್ತಿಯಾದ ವಿವೇಕಾನಂದರ ಚಿಂತನೆಗಳನ್ನು ನಿಲುವುಗಳನ್ನು ಬಿಂಬಿಸುವಂತಹ ಮಾಹಿತಿ ಶಾಲೆ ಅಥವಾ ಕಾಲೇಜಿನ ದಿನಗಳಲ್ಲಿ ದಕ್ಕುವುದು ವಿರಳವಾಗಿತ್ತು.

ಇಂತಹ ಪುಸ್ತಕದಲ್ಲಿ, ಹೀಗೆ, ಇಂತಹವರು ಹೇಳಿದ್ದಾರೆ ಎಂದು ಇಡೀ ಪುಸ್ತಕವನ್ನೇ ಇಂಡೆಕ್ಸ್ ಮಾಡಿಕೊಂಡಿದ್ದ ಖ್ಯಾತ ಕಾದಂಬರಿಯೊಂದನ್ನು ಓದಿ ವಿವೇಕಾನಂದರ ನಿಜದ ನಿಲುವು ಹೀಗಿತ್ತೇ ಎಂದು ಗೊಂದಲಕ್ಕೊಳಗಾಗಿ ಅವರ ಬಗ್ಗೆ ಓದಲು ತೊಡಗಿದೆ. ಸೆಂಟ್ರಲ್ ಲೈಬ್ರರಿಯ ಹತ್ತಾರು ಪುಸ್ತಕಗಳ ನಡುವೆ ಆಸಕ್ತಿಕರ ಎನಿಸಿದ ಪುಸ್ತಕ ‘Swami Vivekananda On Himself’, ಆತ್ಮ ಕಥೆ ಎಂದು ಹೇಳಲು ಬರದಿದ್ದರೂ ಆ ಪುಸ್ತಕದಲ್ಲಿದ್ದದ್ದೆಲ್ಲಾ ವಿವೇಕಾನಂದರ ಬರಹಗಳೇ, ಅವರ ಡೈರಿಯಿಂದ ಹೆಕ್ಕಿದ್ದು, ಹಲವರ ಜೊತೆ ಹಂಚಿಕೊಂಡ ಪತ್ರಗಳು ಹೀಗೆ ಅವರ ವಿಚಾರಗಳನ್ನು ಹಿಡಿಯಾಗಿ ಬಿಂಬಿಸುವಂತಹ ಪುಸ್ತಕವದು. ಓದಿ ಮುಗಿಸುವಷ್ಟರಲ್ಲಿ ಅವರ ಚಿಂತನೆಗಳಿಂದ ತೀವ್ರ ಪ್ರಭಾವಿತಳಾಗಿದ್ದೆ. ವಿವೇಕಾನಂದರು ಮತ್ತವರ ಚಿಂತನೆಗಳು ಎಲ್ಲಾ ಕಾಲಕ್ಕು ಅನ್ವಯವಾಗುವಂತವು. ತಮ್ಮ ಬರಹಕ್ಕೆ ಬೆಂಬಲಿಸುವಂತದ್ದಷ್ಟೇ ಮುಖ್ಯವಾಗಿಸಿಕೊಂಡು ಅವರು ಹೀಗಿದ್ದರು ನೋಡಿ ನಾನು ಹೇಳುತ್ತಿರುವುದೂ ಅದನ್ನೇ ಎಂದು ತಮ್ಮ ವಿಕೃತಿಯನ್ನು ವಿವೇಕಾನಂದರ ಮೇಲೆ ಹೇರಲೆತ್ನಿಸಿದ ಆ ಖ್ಯಾತ ಕಾದಂಬರಿಕಾರರ ಬಗ್ಗೆ ಯೋಚಿಸಿ ನಗು ಬಂದಿತ್ತು.

ವಿವೇಕಾನಂದರು ಹುಕ್ಕ ಸೇದುತ್ತಿದ್ದರು, ಅವರಿಗೆ ಮದುವೆ ಮಾಡಲು ಅವರ ತಾಯಿ ಇನ್ನಿಲ್ಲದ ಪ್ರಯತ್ನ ಪಟ್ಟು ಸೋತು ನೊಂದಿದ್ದರು, ಎಂಬಷ್ಟೇ ಮಾಹಿತಿಗಳಲ್ಲದೆ ದಿನಗಟ್ಟಲೆ ಧ್ಯಾನದಲ್ಲಿ ಮಗ್ನರಾಗಿರಬಲ್ಲವರಾಗಿದ್ದರು, ಸರ್ವ ಧರ್ಮ ಸಮ್ಮೇಳನಕ್ಕೆ ಅತೀ ಕಡಿಮೆ ದುಡ್ಡಿನಲ್ಲಿ ಪ್ರಯಾಣ ಮಾಡಿದ್ದರಲ್ಲದೆ, ವಾಪಾಸು ಬರಲು ಅವರ ಬಳಿ ಹಣವೇ ಇರಲಿಲ್ಲ. ಸಮ್ಮೇಳನದ ಹಿಂದಿನ ದಿನ ರಸ್ತೆಯಲ್ಲಿಯೇ ಕಳೆದಿದ್ದರು. ಕಡೆಯ ಭಾಷಣಕಾರರಾಗಿ, ಎಲ್ಲರೂ ನಿರ್ಗಮಿಸುತ್ತಿರಬೇಕಾದರೆ ತಮ್ಮ ಮಾತನ್ನು ಶುರು ಮಾಡಿದೆ, ಧ್ವನಿಯಲ್ಲಿ ಕಂಪನವಿದ್ದಂತಿತ್ತು ನಂತರ ಯಾವುದೋ ಶಕ್ತಿ ಮೈಯಲ್ಲಿ ಹೊಕ್ಕಂತೆ ಮಾತಾಡಿದೆ ಎಂದು ಸ್ವತಃ ವಿವೇಕಾನಂದರೇ ಅವರ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಸಮ್ಮೇಳನದಲ್ಲಿ ಅವರ ಭಾಷಣ ಎಷ್ಟು ಜನಪ್ರಿಯವಾಯಿತೆಂದರೆ ಮಾರನೇ ದಿನ ಅದೇ ರಸ್ತೆಯ ಮೇಲೆ ಅವರ ಪೋಸ್ಟರ್ ಗಳು ರಾರಾಜಿಸುತ್ತಿದ್ದವು. ಎಲ್ಲ ಇಂಗ್ಲೀಷ್ ಪತ್ರಿಕೆಗಳು ಅವರನ್ನು ಹೊಗಳಿ ಬರೆದಿದ್ದವು. ಇಂತಹ ಸಣ್ಣ ವಿವರಗಳು ನಿಜವಾದ ವಿವೇಕಾನಂದರು ನಮಗೆ ಹತ್ತಿರವಾಗುವಂತೆ ಮಾಡುತ್ತವೆ. ಒಬ್ಬ ಮನುಷ್ಯ ಐಕಾನ್ ಹೌದೋ ಅಲ್ಲವೋ ಎಂಬುದು, ಆತನ ಕೆಲಸಗಳಿಂದ, ಚಿಂತನೆಗಳಿಂದ ನಮಗೆ ತಿಳಿಯಬೇಕೆ ಹೊರತು ಅವನೊಬ್ಬ ಐಕಾನ್ ಹೌದೇ ಹೌದು ಎಂದು ಒಂದು ನಿಯಮಿತ ಗುಂಪಿನ ಹೇರಿಕೆಯಿಂದಾಗಲೀ, ಜಯಂತಿ ಉತ್ಸವಗಳ ಆಚರಣೆಯಿಂದಾಗಲೇ ನಮ್ಮ ಹಾಗೂ ಮುಂದಿನ ಪೀಳಿಗೆಗೆ ತಿಳಿಯಬೇಕಿಲ್ಲ.

ವಿವೇಕಾನಂದರು ಹಿಂದುಗಳ ಬ್ರಾಂಡ್ ಅಂಬಾಸಿಡರ್ ಎಂಬಂತೆ ಬಿಂಬಿಸುವ ಕೋಮುವಾದಿಗಳ ಪ್ರಯತ್ನಕ್ಕೆ ನೀರೆರೆಚುವಂತಿರುವ ಅಮೀನ್ ಮಟ್ಟು ಬರಹ ಕಹಿಯಾದರೂ ಅರಗಿಸಿಕೊಳ್ಳಬೇಕಾದ, ವಿವೇಕಾನಂದರನ್ನು ರಾಜಕೀಯದಿಂದ ಹೊರಗಿಡಲು ಅಗತ್ಯವಾದ ಮಾಹಿತಿಪೂರ್ಣ ಲೇಖನ. ವಸ್ತು ನಿಷ್ಠತೆಯಲ್ಲಿ ಬರಹವನ್ನು ಅಲ್ಲಗಳೆಯುವಂತಿಲ್ಲವಾದರೂ, ವಿವೇಕಾನಂದರನ್ನು ತಿಂಡಿಪೋತ, ದಡ್ಡ ಶಿಕ್ಷಕ ಎಂದೆಲ್ಲ ಕರೆದಿರುವುದು ಅರಗಿಸಿಕೊಳ್ಳಲು ಕಷ್ಟವೇ. ವಿವೇಕಾನಂದರು ಮಾಂಸಾಹಾರಿಯಾಗಿದ್ದರು ಎಂಬುದೂ ನನಗೆ ದಿನೇಶರ ಲೇಖನ ಓದಿಯೇ ತಿಳಿದದ್ದು. ಗಾಂಧೀಜಿ ತಮ್ಮ ಆತ್ಮ ಸಂಯಮ ಪರೀಕ್ಷೆಗಾಗಿ ಹೆಂಗಸಿನೊಂದಿಗೆ ಬೆತ್ತಲೆ ಮಲಗಿದ್ದರು, ನೆಹರು ಮೌಂಟ್ ಬ್ಯಾಟನ್ ಹೆಂಡತಿಯೊಂದಿಗೆ ಸಲಿಗೆಯಿಂದಿದ್ದರು ಎಂಬೆಲ್ಲಾ ಮಾತುಗಳನ್ನು ಕೇಳಿದಾಗ, ಚಿಕ್ಕಂದಿನಿಂದ ಓದಿ ಕೇಳಿ ನಮ್ಮಲ್ಲೇ ಬೆಳೆಸಿಕೊಂಡು ಬಂದಿರುವ ವ್ಯಕ್ತಿಗಳ ಬಗೆಗಿನ ಗೌರವದ ಬುಡವೇ ಅಲ್ಲಾಡಿದಂತಾಗುತ್ತದೆ. ಆದರೆ ಎಷ್ಟೇ ದೊಡ್ಡವನಾದರೂ ಆತನು ನಮ್ಮೆಲ್ಲರಂತೆ ಮನುಷ್ಯ ಎಂಬುದು, ಕಂಡಕಂಡ ಬಾಬಾಗಳು, ಮಠಾಧೀಶರು, ಸ್ವಾಮೀಜಿಗಳಿಗೆ ಕಾಲಿಗೆ ಬಿದ್ದು ದೈವತ್ವಕ್ಕೇರಿಸುವ ನಮಗೆ ಅರಿವಾಗಲು, ಒಳಹೋಗಲು ಇನ್ನು ಬಹಳಷ್ಟು ಸಮಯಬೇಕೆನಿಸುತ್ತದೆ.

ಆರ್.ಎಸ್.ಎಸ್ ನ ಅಂಗವಾದ ಎ.ಬಿ.ವಿ.ಪಿ ಐಕಾನಿಕ್ ವ್ಯಕ್ತಿಯಾದ ಭಗತ್ ಸಿಂಗ್ ನಿಜದಲ್ಲಿ ಒಬ್ಬ ಕಮ್ಯುನಿಷ್ಟ್ ಆಗಿದ್ದ. ದೇವರನ್ನು ಸುತಾ ರಾಂ ನಂಬುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಚಂದವೆತ್ತಿದ್ದ ಹಣವನ್ನು ಕದ್ದು ಸಿನಿಮಾ ನೋಡಲು ಹೋಗಿದ್ದ ಎಂದೆಲ್ಲಾ ನಾವು ಹೇಳದಿದ್ದರೆ, ದೇಶಕ್ಕಾಗಿ ಪ್ರಾಣ ಕೊಟ್ಟ ಆತನ ತ್ಯಾಗವನ್ನು, ಭವಿಷ್ಯದ ಭಾರತ ಹೀಗಿರಬೇಕು ಎಂದು ಆತ ಕಂಡ ಕನಸುಗಳನ್ನು, ಚಿಂತನೆಗಳನ್ನು ಕೋಮುವಾದಿಗಳ ವಶಕ್ಕೆ ಬಿಟ್ಟು ಸುಮ್ಮನೆ ಕುಳಿತಂತಾಗುತ್ತದೆ. ವಿವೇಕಾನಂದ, ಭಗತ್ ಸಿಂಗ್, ಬಿ.ಆರ್. ಅಂಬೇಡ್ಕರ್, ಗಾಂಧೀಜಿ, ಸಾವರ್ಕರ್, ಮುಂತಾದ ಇತಿಹಾಸ ಪುರುಷರನ್ನು ಅವರಿದ್ದ ಹಾಗೇ ಯಾವುದೇ ಹೇರಿಕೆ, ಇಂಟರ್ ಪ್ರೆಟೇಶನ್ನುಗಳಿಲ್ಲದೆ ಅರ್ಥಮಾಡಿಕೊಳ್ಳುವುದು ಸದ್ಯದ ಅನಿವಾರ್ಯ.

ಅರೆ-ಬರೆ

’ಬರೆಯೋದು ನಿಲ್ಲಿಸಿಬಿಟ್ರ? ತುಂಬ ದಿನವಾಯ್ತು ಬ್ಲಾಗಿನಲ್ಲೇನು ಬರೆದಹಾಗಿಲ್ಲ?’ ಎಂಬ ಪ್ರಶ್ನೆಗೆ ಏನುತ್ತರಿಸಲಿ? ತಿಳಿಯಲಿಲ್ಲ. ನಿಜವೇ, ಸುಮಾರು ದಿನಗಳಾದವು, ಬರವಣಿಗೆ ಬಹುತೇಕ ಮರೆತಂತೇ ಆಗಿದೆ. ಅಲ್ಲೊಂದು ಇಲ್ಲೊಂದು ಕಮೆಂಟುಗಳು ಬಿಟ್ಟರೆ, ಓದಿಸಿಕೊಳ್ಳುವಂತದ್ದು ಏನೂ ಬರೆದಿಲ್ಲ. ಮೊದಲಿನಿಂದಲೂ ಹೀಗೆ, ರೆಗ್ಯುಲಾರಿಟಿ ಅನ್ನೋದು ನನಗೆ ಸಿದ್ದಿಸಿದ್ದೆ ಇಲ್ಲ. ಯಾವುದರಿಂದಲೂ ಬೇಗ ಬೋರ್ ಆಗಿಬಿಡುವ, ಒಂದರಿಂದ ಇನ್ನೊಂದಕ್ಕೆ ತಟಕ್ಕನೆ ನೆಗೆದು ಬಿಡುವ ಮನಸ್ಥಿತಿ. ಇದೊಂದು ಚಟವೋ, ಹವ್ಯಾಸವೋ, ಮನೋವೈಕಲ್ಯವೋ ತಿಳಿಯದು. ಬರೆಯಬೇಕೆಂದುಕೊಂಡರೂ ವಿಷಯಗಳಲ್ಲಿ ಅಸ್ಪಷ್ಟತೆ, ಏನೋ ಬರೆಯಲು ಹೋಗಿ ಅದಿನ್ನೇನೋ ಆಗಿ ಕಡೆಗೆ ಯಾವುದೂ ಬೇಡವೆನಿಸಿ ಸುಮ್ಮನಾದದ್ದು ಎಷ್ಟು ಸಲವೋ. ಅದೇಕೆ ಹಾಗಾಗುತ್ತದೆ? ಬರವಣಿಗೆಯ ಬಗ್ಗೆ ಬರೆಯ ಹೊರಟಷ್ಟು ಅಚ್ಚರಿಗಳು ಕಾಡುತ್ತವೆ. ಪಿಯುಸಿ ದಿನಗಳವು, ಯಾವುದಾದರೊಂದು ಕಾದಂಬರಿ ಸಿಕ್ಕರೆ ಊಟ ನಿದ್ದೆ ಬಿಟ್ಟು ಕೂರುತ್ತಿದ್ದದ್ದು, ಓದು ಮುಗಿದ ನಂತರ ಯಾರೊಂದಿಗೂ ಮಾತೇ ಆಡದೆ ಕೆಲವು ಕಾಲ ಅದರ ಗುಂಗಿನಲ್ಲೇ ಕಳೆದು ಹೋಗುತ್ತಿದ್ದುದ್ದು ಬಿಟ್ಟರೆ ಓದಿದ್ದನ್ನೇ ಮತ್ತೆ ಓದುವುದಾಗಲೀ, ಅದರ ಬಗ್ಗೆ ಬರೆಯುವುದಾಗಲೀ ಬೇರೆಯದೇ ಗ್ರಹದ ಜೀವಿಗಳ ಕೆಲಸವೆನ್ನುವಷ್ಟು ಮಟ್ಟಿಗೆ ಬರವಣಿಗೆಗೆ ಅಪರಿಚಿತಳಾಗಿದ್ದೆ.

ಈಗಲೂ ಬರವಣಿಗೆಯ ಬಗ್ಗೆ ನನ್ನದೇ ದೂರುಗಳಿವೆ. ಬರೆಯಬೇಕೆನ್ನುವ ವಿಷಯದ ಆಯ್ಕೆಯಿಂದ ಹಿಡಿದು ಪ್ರತಿ ಪದಕ್ಕೂ, ಸಾಲಿಗೂ ತಿಣುಕಾಡುತ್ತಾ, ಅತ್ಯಂತ ಗೊಂದಲದಲ್ಲಿ ಬರೆಯುತ್ತೇನೆ. ಬರೆದ ಮೇಲೆ ಅಪೂರ್ಣವೆನಿಸ ತೊಡಗಿ ಅತೃಪ್ತಿಯಲ್ಲಿ ಬೇಯುತ್ತೇನೆ. ಆದರೂ ಬರವಣಿಗೆ ನನಗೆ ಖುಷಿಕೊಡುವ ವಿಷಯ. ಓದುವಾಗಿರುವ ಅಸ್ಪಷ್ಟತೆ ಗೊಂದಲಗಳು ಬರೆಯತೊಡಗಿದಾಗ ಬಗೆಹರಿದ್ದಿದೆ. ನನ್ನದೆ ನಿಲುವುಗಳು, ಅಭಿಪ್ರಾಯಗಳು ಇನ್ನಷ್ಟು ಪಕ್ವಗೊಂಡಿದ್ದಿದೆ. ಬರೆಯತೊಡಗಿದ್ದಾಗಿನಿಂದ ನನ್ನ ಓದಿನ ರೀತಿಯೇ ಬದಲಾಗಿದೆ. ಕೆಲವೊಮ್ಮೆ ನನ್ನ ಓದು ಕೇವಲ ನನ್ನ ಬರವಣಿಗೆಗಷ್ಟೇ ಸೀಮಿತವಾಗಿ ಹೋಯ್ತೆ, ಬರೆಯ ತೊಡಗುವುದಕ್ಕೂ ಮುಂಚಿನ ತನ್ಮಯತೆ ಇಂದ ನಾನಿದನ್ನು ಓದುತ್ತಿಲ್ಲವೇನೋ ಎನಿಸಿ ಕಳವಳಗೊಳ್ಳುತ್ತೇನೆ. ’ಬರವಣಿಗೆ ಒಂದು ಉತ್ತಮ ಓದಿನ ರೀತಿ’ ಎಂಬಂತಹ ಮಾತುಗಳನ್ನು ಕೇಳಿದಾಗ ಬರವಣಿಗೆಯಿಂದಲೇ ನನ್ನ ಓದು ಇನ್ನಷ್ಟು ಸಮೃದ್ದವಾಗುತ್ತಿದೆ, ಎಂದು ಸಂಭ್ರಮಿಸಿಯೂ ಇದ್ದೇನೆ.

ಏನು ಬರೆಯಬೇಕು? ಯಾವುದರ ಬಗ್ಗೆ ಬರೆಯಬೇಕು? ನಮ್ಮ ಅನುಭವಗಳನ್ನೆಲ್ಲ ಬರಹವಾಗಿಸಬೇಕೆ? ನನ್ನ ಅತೀ ಬೇಸರದ ದಿನದ ಒಂಟಿತನ, ಖುಷಿಯಾಗಿದ್ದಾಗಿನ ಹುರುಪು, ಮನಸ್ಸಿನ ಸಂತೋಷ, ದುಗುಡ ದುಃಖ ತುಂಟತನ, ಅವನಾರೋ ಕೈ ಹಿಡಿದಾಗ ಉಂಟಾಗುವ ರೋಮಾಂಚನ, ಇನ್ನೊಬ್ಬನ ಮಾತಿಗೇ ಕಿವಿಯಾಗಿ ಬದುಕು ಕಳೆದುಬಿಡಬೇಕೆನಿಸುವ ಹುಂಬತನ, ತಲೆ ಮೇಲೆ ಕೈ ಇಟ್ಟು ಹರಸುವ ಹಿರಿಯರ ಸ್ಪರ್ಶದ ಆರ್ದ್ರತೆ, ಎಲ್ಲವನ್ನೂ ತನ್ನ ಅಚ್ಚರಿಯ ಕಣ್ಣುಗಳಲ್ಲಿ ನೋಡುತ್ತಿರುವ ಮುಗ್ಧ ಮಗು, ಹೀಗೆ ಎಚ್ಚರವಾಗಿರುವಾಗಿನ ನನ್ನ ಬದುಕಿನ ಪ್ರತಿ ಕ್ಷಣ ಗಳಿಗೆಯೂ ನನಗೆ ಅನುಭವವೇ. ಈ ಹೊತ್ತು ಹೀಗೆ ಕೂತು ಬರೆಯುತ್ತಿರುವ ನಾನು ಈ ಕ್ಷಣವನ್ನು ಅನುಭವಿಸುತ್ತಿಲ್ಲವೇ? ಓದುತ್ತಿರುವ ನೀವು ಅನುಭವವಲ್ಲದೇ ಮತ್ತೇನು ಪಡೆಯುತ್ತಿದ್ದೀರಿ? ಅನುಭವಗಳನ್ನೆಲ್ಲ ಬರಹವಾಗಿಸುವುದು ಎಂದರೆ ಹೇಗೆ? ಅನುಭವಿಸಿ ಬರೆಯುವುದು ಎಂದರೇನು? ಯಾವ ಯಾವ ಅನುಭವಗಳ ಬಗ್ಗೆಯೆಂದು ಬರೆಯುತ್ತೀರಿ? ಉಹ್ಞುಂ ನನ್ನಲ್ಲಿ ಸ್ಪಷ್ಟತೆ ಇಲ್ಲ.

ನಮ್ಮೆಲ್ಲ ಯೋಚನೆಗಳನ್ನು ಕಲ್ಪನೆಗಳನ್ನು ಚಿಂತನೆಗಳನ್ನು ಮೊನಚುಗೊಳಿಸುವ ಶಕ್ತಿ ಬರವಣಿಗೆಗಿದೆ ಎಂಬುದು ನನ್ನ ನಂಬಿಕೆ, ಹೀಗಾಗಿಯೇ ನನಗೆ ಬೇರೆ ಚಟಗಳಂತೆ ಹತ್ತಿಸಿಕೊಂಡ ಇದನ್ನು ಅಷ್ಟೇ ಸುಲಭವಾಗಿ ಬಿಟ್ಟು ಬಿಡಲು ಆಗುತ್ತಿಲ್ಲ. ನನ್ನ ಯೋಚನೆಗಳ ನಿರಂತರ ತಿಕ್ಕಾಟಕ್ಕೆ, ಸ್ಪಷ್ಟತೆಗೆ, ಗೊಂದಲಗಳಿಗೆ ಬರವಣಿಗೆಯ ಜೊತೆ ಬೇಕೇಬೇಕು. ಬರೆಯಬೇಕೆಂದೇ ಓದ ತೊಡಗುತ್ತೇನೆ ಅಥವಾ ಓದುತ್ತಿದ್ದೇನಾದ್ದರಿಂದ ಬರೆಯತೊಡಗಿದ್ದೇನೆ. ಬರವಣಿಗೆಯು ನನ್ನ ಪಾಲಿಗೆ ಬರೆದು ಮುಗಿಸಿಬಿಡುವ ಕ್ರಿಯೆಯಲ್ಲ, ನನ್ನಲ್ಲೇ ನಿರಂತರ ಹರಿಯುವ, ಕಾಡುವ, ಬೆನ್ನುಬೀಳುವ ಗೀಳು.

ಮತ್ತೆ ಬೋಂಡಾ ಜಾಮೂನು…


“ನೀನು ಮದ್ವೆ ಮಾಡ್ಕೊಳಲ್ವೇನೆ!?” ತಮ್ಮೆಲ್ಲ ಪ್ರಯತ್ನ ವಿಫಲವಾಗುತ್ತಿರುವ ವ್ಯಥೆಯಲ್ಲಿ ಅಮ್ಮ ಕೇಳುತ್ತಿದ್ದರು. ಮದುವೆಯಷ್ಟು mysterious ಸಂಗತಿ ಮತ್ತೊಂದಿದೆ ಅನ್ನಿಸೋಲ್ಲ ರೀ, ಹೀಗಾಗಿ ನನ್ನ ಬರವಣಿಗೆ ಎಲ್ಲ ಮದುವೆಯ ಸುತ್ತಲೇ ಯಾಕೆ ಸುತ್ತುತ್ತದೆ ಎಂಬ ಜನರ ಕಂಪ್ಲೇಂಟನ್ನು ಕಾಂಪ್ಲಿಮೆಂಟೆಂದುಕೊಂಡು ಮತ್ತೆ ಅದರ ಬಗ್ಗೆಯೇ ಬರೆಯಬೇಕೆನ್ನಿಸಿ ಬರೆಯುತ್ತಿದ್ದೇನೆ. ಮೊನ್ನೆ ಒಂದು ಲಗ್ನ ಪತ್ರಿಕೆಯಲ್ಲಿ “ಮದುವೆಯಿಂದ, ಮದುವೆಗಾಗಿ, ಮದುವೆಗೋಸ್ಕರವೇ ಜೀವನವಲ್ಲವೆ” ಎಂದೊಬ್ಬ ಮಹರಾಯ ಬರೆದುಕೊಂಡಿದ್ದ, ನೋಡಿ ಹೆದರಿಕೆಯಾಗಿ ನಗು ಬಂದಿತು. ‘ಮದುವೆ’ ಇಷ್ಟು ವರ್ಷಗಳಾದರೂ ತನ್ನ ಚಾರ್ಮ್ ಕಳೆದುಕೊಳ್ಳದೆ ಎಲ್ಲರಿಗೂ ಹೊಸದರಂತೇ ಹೇಗೆ ಕಾಣುತ್ತದೆ ಮತ್ತು ಎಲ್ಲರನ್ನು ಹೇಗೆ ತನ್ನೆಡೆಗೆ ಸೆಳೆಯುತ್ತದೆ ಎಂಬುದರ ಮೇಲೆ ದೊಡ್ಡದೊಂದು research ಮಾಡಿ ಥೀಸೀಸ್ ಬರೆಯಬೇಕು. ಮದುವೆಯಾಗಿ ಹತ್ತು ವರ್ಷಗಳಾಗಿ ಇಬ್ಬರು ಮಕ್ಕಳ ತಾಯಿಯಾಗಿ ೭೦+ ಕೆ.ಜಿ.ಗಳ ಪರ್ವತವಾಗಿ, ಗಂಡನಿಗೆ permanant ಕಿರಿಕಿರಿಯಾಗಿ, ನೋಡಿದ ತಕ್ಷಣ ಇವರ ಜೀವನದಲ್ಲಿ ಹೊಸತು ಇನ್ನೇನಾದರೂ ನಡೆಯಲಿಕ್ಕೆ ಸಾಧ್ಯವೇ ಎಂದೆನಿಸಿಬಿಡುವ ನನ್ನ ಸಂಬಂಧಿಕರೊಬ್ಬರಿದ್ದಾರೆ, ಅಮ್ಮನ ಹತ್ತಿರದ ಫ್ರೆಂಡು ಆಕೆ. ನಮ್ಮಮ್ಮನ ಕಣ್ಣಿಗೆ ಅವರದು ಸಂಪೂರ್ಣ ಜೀವನ, ಹುಟ್ಟಿದ್ದಕ್ಕೆ ಸಾರ್ಥಕತೆ. ‘ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದ ಹುಡುಗಿ, ಗಂಡ ಮಕ್ಕಳ ಜೊತೆ ಸಂತೋಷವಾಗಿ ಸಂಸಾರ ಮಾಡಿಕೊಂಡಿದ್ದಾಳೆ ನೋಡು’ ಎಂದೆನ್ನುತ್ತಿರುತ್ತಾರೆ. ನನಗೂ ಈ ಉಪದೇಶದ ಫಲವಾಗಿ, ತಲೆಯಲ್ಲಿ ಎರೆಡೆರೆಡು ಸೈಟ್ ಗಳಾಗಿರುವ, ಗುಡಾಣ ಹೊಟ್ಟೆಯ (ಸ್ಸಾರಿ ಮತ್ತೊಮ್ಮೆ ಬರೆಯೋಲ್ಲ) ಗುಂಡಣ್ಣಗಳ ಫೋಟೋ ತಂದು ತೋರಿಸಿ ನಾನು ರೇಗುವಂತೆ ಮಾಡುತ್ತಾರೆ. ಗುಂಡಗಿರೋರೆಲ್ಲ ಮನುಷ್ಯರಲ್ಲೇನ್ರೀ? ಅಂತ ನೀವು ಕೇಳಬಹುದು. ಆದರೆ ಕಾಲೇಜು ಯವ್ವನದ ದಿನಗಳಲ್ಲಿ ಗರ್ಲ್ ಫ್ರೆಂಡ್ ಸಿಗದೆ, ಸಿಕ್ಕಿದರೂ ಆಕೆಯನ್ನು ಮದುವೆಯಾಗದೆ, ಜೀವನದಲ್ಲಿ ಜಿಗುಪ್ಸೆ ಬಂದು ಅಮ್ಮನ ಮಾತು ಕೇಳಿಬಿಡೋಣ ಎಂದುಕೊಂಡು ಅರೇಂಜ್ ಮ್ಯಾರೇಜ್ ಗೆ ಅಣಿಯಾಗಿರುವ ಇಂತಹ ಗಂಡುಗಳ ಮೇಲೆ ನನಗೆ ಕರುಣೆ ಉಕ್ಕಿದರೂ, ಇರುವುದು ಒಂದೇ ಜೀವನ, ಹಾಗು ಪುನರ್ಜನ್ಮದಲ್ಲಿ ನನಗೆ ನಂಬಿಕೆಯಿಲ್ಲದ ಕಾರಣ ನನ್ನ ಅಮೂಲ್ಯ ಜೀವನವನ್ನು ಇವರಲ್ಲೊಬ್ಬರ ಜೊತೆ ಎಕ್ಸ್ ಪರಿಮೆಂಟ್ ಗೆ ಒಳಪಡಿಸಲಿಕ್ಕೆ ನನಗೆ ಭಯವಾಗಿದೆ.

ನೀನಿರೋ ಚಂದಕ್ಕೆ ಇಂತಹ ಗಂಡುಗಳೇ ಸಿಗುವುದು ಅನ್ನೋ ಬೆದರಿಕೆಗಳು. ಕೂದಲು ಜಾಸ್ತಿ ಉದುರಿದರೆ, ಎರೆಡು ದಿನ ಸತತವಾಗಿ ಕೋಳಿ ಊಟ ಉಂಡರೆ, ಬಿಸಿಲಲ್ಲಿ ತಿರುಗಾಡಿ ಚರ್ಮ ಸ್ವಲ್ಪ ಕಪ್ಪಾದರೆ, ಅನ್ನ ಮಾಡಲಿಕ್ಕೆ ಹೋಗಿ ಕುಕ್ಕರ್ ಸಿಡಿಸಿದರೆ, ಇತ್ಯಾದಿ ಎಲ್ಲವೂ ನನ್ನಮ್ಮನಿಗೆ ನನ್ನ ಮದುವೆಯ ದೊಡ್ಡ ದೊಡ್ಡ ತಡೆಗಳಾಗಿ ಕಾಣುತ್ತವೆ. ಹುಡುಗರಿಗೆ ಈ ಕಷ್ಟವಿರುವುದಿಲ್ಲವೇನೋ? ಪಾಪ ಅವರಿಗೆ ಮದುವೆ ಮಾಡಿಕೊಳ್ಳಲು ಉತ್ಸಾಹವೇ. ಕಾರಣವೇನೇ ಇರಲಿ ಆದರೆ ಮದುವೆ ಆಗುವ ಹುಡುಗನಿಗೆ ಇಂಥವೇ ಬೆದರಿಕೆಗಳಿರುತ್ತವೆ ಅಲ್ವೇ? ‘ಇನ್ನೇನು ಮಹರಾಯ ಹಳ್ಳಕ್ಕೆ ಬಿದ್ದಾಯ್ತು!’, ‘ಕುರಿ ಬಲಿಗೆ ರೆಡಿಯಾಗಿದೆ’, ‘ಅಮ್ಮಾವ್ರ ಗಂಡ ಆಗ್ತಿ ಇನ್ಮೇಲೆ ಕಂಗ್ರಾಟ್ಸ್!’ ಎನ್ನುವ ನಮ್ಮ ಗೆಳೆಯರ ಗುಂಪಿನ ಕಾಲೆಳಿಯುವ ಕಮೆಂಟುಗಳಿಗೆ, ‘ನನ್ನ ಮಕ್ಕಳ ಯಾರಾದರೂ ಒಬ್ಬರು, ಒಳ್ಳೇದಾಗ್ತಿದೆ, ರೊಮ್ಯಾಂಟಿಕ್ ಜೀವನಕ್ಕೆ ಕಾಲಿಡ್ತಿದೀಯ ಅಂತ ವಿಷ್ ಮಾಡ್ತೀರ ನೋಡಿ’ ಎಂದು ಮದುವೆ ಆಗಲಿದ್ದ ಗೆಳೆಯ ವಿಷಾದಿಸುತ್ತಿದ್ದ.

ಅದಿರಲಿ ನಾನು ನನ್ನ ಬಗ್ಗೆ ಯೋಚಿಸಿ ಮದುವೆಯ ಬಗ್ಗೆ ನನ್ನ ನಿಜವಾದ ಅಭಿಪ್ರಾಯವೇನು ಎಂದು ಕೆದಕಿ ಬೆದಕಿ ಕೇಳಿಕೊಳ್ಳುತ್ತಿದ್ದೆ. ಒಂದೂವರೆ ದಿನದಷ್ಟು ಇತರರ ಸಂಭ್ರಮಕ್ಕೆ ಎರೆಡು ಮೂರು ತಿಂಗಳಿನಷ್ಟು ನನ್ನ ಸಮಯ ಹಾಳು ಮಾಡಿಕೊಂಡು, ತೀರದ ಸೀರೆ ಒಡವೆಗಳ ಸೆಲೆಕ್ಷನ್ಗಳ ಜಂಜಡದಲ್ಲಿ ಮುಳುಗಿ. ಈ ಓಲೆಗೆ ಈ ಸೀರೆ ಒಪ್ಪುತ್ತಾ ಎಂದೆಲ್ಲಾ ಸಿಲ್ಲಿ ಪ್ರಶ್ನೆಗಳಿಗೆ ಉತ್ತರಿಸಿಕೊಂಡು. ಅರಿಸಿನ ಮದರಂಗಿ ಡಿಸೈನ್ ಗಳು, ಅವರಿವರ ಮನೆ ಗುಟ್ಟುಗಳು, ಕೆಲಸಕ್ಕೆ ಬಾರದ ಗೆಳತಿಯರ ರೇಗಿಸುವಿಕೆಗಳಿಗೆಲ್ಲಾ ನಾಚುವಂತೆ ನಟಿಸುತ್ತಾ, ಭವಿಷ್ಯದ ಅತ್ತೆಯ ಮನೆಯ ಬಗ್ಗೆ ಹೆದರಿಕೊಳ್ಳುತ್ತಾ, ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪನ ಇದ್ದಬದ್ದ ದುಡ್ಡನ್ನೆಲ್ಲಾ ಖರ್ಚುಮಾಡಿಸಿ ಸಾಲ ಹೆಚ್ಚಿಸುವ ಸಂಭ್ರಮದ ಮದುವೆ ಬಗ್ಗೆ ಇವರಿಗೆಲ್ಲ ಏಕಷ್ಟು ಆತುರ ಅನಿಸುತ್ತದೆ. ಮದುವೆಯ ಬಗ್ಗೆ ಇಂತಹ ಪೂರ್ವಾಗ್ರಹವಿರುವ ನನಗೆ ಗಂಡು ಸಿಗುವ ಮಾತು ಹಾಗಿರಲಿ, ಹೀಗೆಲ್ಲಾ ಅಂದುಕೊಂಡಿರುವೆ ಎಂದು ನಮ್ಮಮ್ಮನಿಗೆ ಸುಳಿವು ಸಿಕ್ಕರೂ ನನಗೆ ನಾಳೆಯಿಂದ ಮನೆಯಲ್ಲಿ ಊಟ ದಕ್ಕುವುದು ದುಸ್ತರವಾಗಿಬಿಡುವುದು. ಗುಟ್ಟು ನಿಮ್ಮಲ್ಲೇ ಇರಲಿ.

ಇಷ್ಟೆಲ್ಲಾ ಪ್ರಗತಿಪರ ಯೋಚನೆಗಳಿಗಿಟ್ಟುಕೊಂಡಿರುವ ನಾನು ಮದುವೆ ಆಗದೆ ಉಳಿದರೆ ಮಾಡುವುದೇನು? ಎಂತಲೂ ಯೋಚನೆ ಮಾಡಬೇಕಾಗುತ್ತದೆ. ಆಗ ನನ್ನ ದಪ್ಪನೆ ತಲೆಗೆ ಹೊಳೆಯುವುದು, ಬಹುಶಃ ಇದೇ ಭಯದಿಂದ ಎಲ್ಲರೂ ಮದುವೆಯ ಮೊರೆ ಹೋಗುತ್ತಿರುವುದು ಎಂದು. ‘ನನ್ನ ಗಂಡ ಡಾಕ್ಟರ್ರೂ’ ಎಂದು ನನ್ನ ಗೆಳತಿ ಹೇಳುವಾಗ ಅವಳ ಕಣ್ಣಲ್ಲಿರುವ ಹೆಮ್ಮೆ ಅವಳೇ ನಿಜವಾಗಿ ಡಾಕ್ಟರಳಾಗಿದ್ದರೆ ಇರುತ್ತಿತ್ತೇ? ಎಂದುಕೊಳ್ಳುತ್ತಿದ್ದೆ. ಹೆಣ್ಣಿಗೊಂದು ಗಂಡು ಸೇರಿ ಹೇಗೋ ಏನೋ ಹೊಂದಿಕೊಂಡು ಬದುಕಿದ್ದರಲ್ಲವೇ ಪ್ರಪಂಚ? ಹಾಗಿದ್ದಿದ್ದಕ್ಕಲ್ಲವೇ ನಾನೂ ಇರುವುದು, ಎಂದೆಲ್ಲಾ ಮೂಲ ಉದ್ದೇಶಕ್ಕಿಣುಕಿದರೂ, ಅದೊಂದಕ್ಕೆ ಮದುವೆ ಎಂಬ ಜಂಬು ಸರ್ಕಸ್ ಮಾಡಲೇ ಬೇಕೆ ಎಂದೂ ಅನಿಸುತ್ತದೆ. ಯೋಚಿಸಿ ಯೋಚಿಸಿ ತಲೆಚಿಟ್ಟು ಹಿಡಿದು ಕಡೆಯಲ್ಲಿ ನನ್ನ ತಲೆಯಲ್ಲಿ ಕೂದಲ ಜೊತೆ ಉಳಿಯುವ ಪ್ರಶ್ನೆಯೊಂದೇ ‘ಮದುವೆ ಬೇಕೆ?!’ ಎಂದು.

ಅಂದಹಾಗೆ ಇಷ್ಟೆಲ್ಲಾ ತಲೆಯಲ್ಲಿ ಮೊಸರು ಕಡೆಯುತ್ತಿದ್ದರೂ ಅಮ್ಮನ ಒತ್ತಾಯಕ್ಕೆ ಮಣಿದಂತೆ ಮಾಡಿ ಈ ವಾರ ಮತ್ತೆ ಗಂಡು ನೋಡಲು ಒಪ್ಪಿದ್ದೇನೆ. ನಮ್ಮ ಮನೆಯಲ್ಲಿ ಈ ಭಾನುವಾರ ಬೋಂಡಾ ಜಾಮೂನು. ಬೋಂಡಾ ಜಾಮೂನು ಸಿಗುತ್ತದೆ ಎಂಬ ಆಸೆ ಅಲ್ಲದೇ ಇನ್ನೊಂದು ಹಾಸ್ಯಲೇಖನಕ್ಕೆ ಸ್ಪೂರ್ತಿ ಸಿಗಬಹುದೆಂಬ ಗಂಭೀರ ಉದ್ದೇಶಗಳಿಂದ ಗಂಡಿನ ಬರುವಿಕೆಗೆ ನನ್ನಮ್ಮನಷ್ಟೇ ನಾನೂ ಕಾತರಳಾಗಿದ್ದೇನೆ..

ನೀನಿಲ್ಲದೇ ನನಗೇನಿದೆ..​.?

‘ನಿನ್ನ ನೆನಪಾಗುತ್ತೆ’ ಅಂತಷ್ಟೇ ಡೈರಿನಲ್ಲಿ ಬರೆದು ನೋಡ್ತಾ ಕೂತಿದ್ದೆ. ನನ್ನ ಕನವರಿಕೆ, ಬಿಕ್ಕಳಿಕೆ, ಕನಸು, ಮುನಿಸು, ಆಸೆ, ನಿರೀಕ್ಷೆ ಎಲ್ಲವೂ ಇದರ ಸುತ್ತಲೇ
ಸುತ್ತುತ್ತಿದೆ ಅನಿಸಿತು. ನೀ ಬಂದು ಬಿಟ್ಟರೆ ಅವಕ್ಕೆಲ್ಲ ಅರ್ಥ ಸಿಕ್ಕಂತೆ. ಬೆರಳಲ್ಲಿ ಬೆರಳು ಹೆಣೆದು, ನಿನ್ನ ತೊಡೆಯ ಮೇಲೆ ಹರಡಿದ ನನ್ನ ಕೂದಲನ್ನು ನೇವರಿಸುತ್ತಾ, ಮೈ ಮರೆತು ನೀ ಮಾತಾಡುತ್ತಿದ್ದೆಯಲ್ಲ, ಬಾಲ್ಕನಿಯ ಕಡೆ ನೋಡಿದಾಗಲೆಲ್ಲ ಅದೇ ಚಿತ್ರ ಕಣ್ಣ ಮುಂದೆ. ‘ಉಫ್’ ಎಂದು ಕಿವಿಯಲ್ಲಿ ಕಚಗುಳಿ ಆಗುವ
ಹಾಗೆ ಗಾಳಿ ಊದುತ್ತೀಯಲ್ಲ, ನೆನಪಾದಾಗಲೆಲ್ಲ ರೋಮಾಂಚನ. ಕಳ್ಳ ಹೆಜ್ಜೆ ಇಟ್ಟು, ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಹಿಂದಿನಿಂದ ಬಂದು ತಬ್ಬುತ್ತಿದ್ದೆಯಲ್ಲ, ಮನಸ್ಸಿಲ್ಲದ ಮನಸ್ಸಿನಿಂದ ಅಡಿಗೆ ಮನೆ ಹೊಕ್ಕರೆ ಅದೇ ನೆನಪು. ನೀನು ಯಾಕೆ ಹೀಗೆ ನೆನಪಾಗಾಬೇಕು? ಇಷ್ಟು ವರ್ಷ ನೀನಿಲ್ಲದೇ ನಾನು ಬದುಕಿದ್ದೂ ಹೌದಾ? ಕೇಳಿಕೊಳ್ಳಲೂ ಭಯವಾಗುತ್ತದೆ. ನನ್ನಿಂದ ನಿನ್ನನ್ನು ಹೊರಗಿಟ್ಟು ನೋಡಿಕೊಂಡರೆ ನನಗೆ ನಾನು ಎಷ್ಟು ಟೊಳ್ಳು ಎನಿಸಿಬಿಡ್ತೆನೆ ಗೊತ್ತಾ? ಒಂದು ವೇಳೆ ನೀನಿಲ್ಲದೇ ಹೋಗಿದ್ದರೆ ನನ್ನ ಬದುಕು
ಎಷ್ಟು ಅಪೂರ್ಣ, ಎಷ್ಟು ಖಾಲಿ, ಎಷ್ಟು ನೀರಸವಾಗಿರುತಿತ್ತು ಅಲ್ವೇ ಎಂದುಕೊಳ್ಳುತ್ತಿದ್ದೆ. ‘ನೀನಿಲ್ಲದೇ’ ಎಂಬ ಸ್ಥಿತಿಯನ್ನು ಕಲ್ಪಿಸಿಕೊಳ್ಳಲೂ ಧೈರ್ಯವಾಗಲಿಲ್ಲ ನನಗೆ. ಯಾಕಿಷ್ಟು ನನ್ನೊಳಗೆ ತುಂಬಿ ಹೋಗಿದ್ದೀ ಹುಡುಗ? ನನ್ನನ್ನೇ ನಾನು ಕಳೆದುಕೊಳ್ಳುತ್ತಿರುವಂತೆ ಇಷ್ಟಿಷ್ಟೇ ನನ್ನೊಳಗೆ ನೀನು ಆವರಿಸಿ ನೀನೆ ನಾನಾಗಿ ಹೋಗುತ್ತಿರುವಂತೆ ಅನಿಸುತ್ತದೆ.

ನಿನ್ನ ತೊಡೆಯೊಳಗೆ ಮುಖವಡಗಿಸಿ ಕಿಶೋರ್ ಕುಮಾರ್ ನ ‘ಹಮೆ ತುಮ್ ಸೆ ಪ್ಯಾರ್ ಕಿತನ’ ಕೇಳುವಾಗಿನ ಸುಖ ನೆನಪಾಗಿ, ಹಾಡು ಹಾಕಿದೆ ಎಷ್ಟು ನಿರ್ಭಾವುಕ ಅನಿಸತೊಡಗಿತು. ನೀನಿಲ್ಲದೇ ಎಲ್ಲವೂ ಎಷ್ಟು ಯಾಂತ್ರಿಕ. ಎಲ್ಲಕ್ಕು ಜೀವ ತುಂಬುವ ಮಾಂತ್ರಿಕ ನೀನು. ಯಾಕೆ ಎಲ್ಲವೂ ಹೀಗೆ ಸಾಯುವಷ್ಟು ಬೇಸರವೆನಿಸುತ್ತಿದೆ, ನೀ ಬರದೇ? ಸದ್ದಾಗದೆ ಬಂದು ಬಾಗಿಲಲ್ಲಿ ನಿಲ್ಲು, ನಾನು ಕಾದು, ಕನವರಿಸಿ, ಕಣ್ಮುಚ್ಚಿ………….. ತೆಗೆಯುವಷ್ಟರಲ್ಲಿ.

ಹೆಸರಲ್ಲಿ ಏನಿದೆ?!

ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತುನಿಮಿಷಗಳವರೆಗೆ ಮಾತಾಡುತ್ತಿದ್ದ, ಕೇಳುತ್ತ ಕಣ್ಣು ತೆರೆದುಕೊಂಡೇ ನಿದ್ದೆ ಮಾಡುವುದುನನಗೆ ಹೊಸತಲ್ಲ ಅನ್ನಿ ಆದರೆ ಇದ್ದಕ್ಕಿದ್ದ ಹಾಗೆ ನನಗೆ ನೆನಪಾಗಿದ್ದು ನಾನವನ ಹೆಸರುಮರೆತಿದ್ದೇನೆಂದು. ಆತನ ಮಾತುಕೇಳಿಸಿಕೊಳ್ಳುತ್ತಲೆ ತಲೆಗೆ ಕೆಲಸ ಕೊಟ್ಟೆ, ಎಲ್ಲವನ್ನೂrecall ಮಾಡಿಕೊಳ್ಳ ತೊಡಗಿದೆ, ಕೆಲಸಕ್ಕೆ ಬಾರದ ಅವನ ಎಲ್ಲ ಮಾತುಗಳುನೆನಪಾಗುತ್ತಿದ್ದವು ಹೆಸರೊಂದು ನೆನಪಾಗಲೊಲ್ಲದು. ತುಂಬಾ ಕಾಮನ್ ಎನಿಸುವ ಹೆಸರದು,ಸುರೇಶ ಮಹೇಶ ರಮೇಶ ಸತೀಶಗಳ ಹಾಗೆ ಆದರೆ ಈ ಚಾಟರ್ ಬಾಕ್ಸ್ ಯಾವ ಶ ಎಂದು ಹೊಳೆಯಲೇ ಇಲ್ಲ. ಹೆಸರು ಮನುಷ್ಯನಿಗೆ ತುಂಬಾ ಮುಖ್ಯವೆನ್ನುತ್ತಾರೆ (ಸಾಕು ನಾಯಿಬೆಕ್ಕುಗಳಿಗೂ?!), ಎಲ್ಲರಿಗು ನೆನಪಿನಲ್ಲಿರುವಂತಹ ಹೆಸರಿಡಬಾರದಿತ್ತೆ? ಇವನಿಗೆ‘ಮಾತೇಶ’ ಎಂದಿಟ್ಟಿದ್ದರೆ ಹೆಚ್ಚು ಸರಿಯಿತ್ತು ಅಂದುಕೊಳ್ಳುತ್ತಿದ್ದಂತೆ ಮುಖದಲ್ಲಿಮುಗುಳುನಗೆ ಮೂಡಿತು. ತನ್ನ ಮಾತನ್ನು ಇವಳು ಎಂಜಾಯ್ ಮಾಡುತ್ತಿದ್ದಾಳೆ ಅನ್ನಿಸಿತೇನೋ ಅವನಿಗೆ ಪಾಪ ಇನ್ನೂ ಹುರುಪಿನಿಂದ ಮಾತನಾಡ ತೊಡಗಿದ. ನನಗೆ ಅವನ ಹೆಸರು ನೆನಪಾಗದೇ, ಅವನಿಗೆ ಉತ್ತರಿಸಲೂ, ಅವನನ್ನು ಮಾತಡದಂತೆ ತಡೆಯಲೂ ಆಗದೆ ಆ ಜಾಗ ಬಿಟ್ಟು ಎದ್ದುಬಿದ್ದು ಓಡಿಬರುವ ಹಾಗಾಗುತ್ತಿತ್ತು.

ನನ್ನ ಗೆಳತಿ ಒಬ್ಬರಿದ್ದಾರೆ ಆಕೆಯ ಹೆಸರು ’ಹೂ’ ಎಂದು, ಮೊದಲನೇ ಬಾರಿ ಕೇಳಿದಾಗನಿಮ್ಮ ಹಾಗೇ ನನಗೂ ’ವಿಚಿತ್ರ’ ಎನಿಸಿತ್ತು, ಆಕೆಯ ಹಲವು ನಾರ್ಥ್ಇಂಡಿಯನ್ ಗೆಳೆಯರು ಆಕೆಯ ಹೆಸರನ್ನು ಹಿಂದಿಗೆ ಭಾಷಾಂತರಿಸಿ ‘ಫೂಲ್’ (fool) ಎಂದುಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಆಕೆಯನ್ನು ರೇಗಿಸುವುದು ಇನ್ನು ಸುಲಭ ’who ishoo?’ ಎಂತಲೋ ’who let the dogs out, who(o) whoo whoo’ ಎಂದು ಕಿಚಾಯಿಸತೊಡಗುತ್ತೇವೆ. ವಿದೇಶಿಯರು ಯಾರಾದರು ಕೇಳಿದರೆ, ಇವರು ಹೂ ವೇರ್ ವಾಟ್ ಅಂತೆಲ್ಲ ಹೆಸರಿಟ್ಟುಕೊಳ್ಳುತ್ತಾರ ಎಂದು ತಲೆ ಕೆರೆದುಕೊಳ್ಳಬೇಕು. ನನ್ನ ಕ್ಲೈಂಟ್ಕಂಪೆನಿಯ HR ಒಬ್ಬರ ಹೆಸರು ವಿಚಿತ್ರಾಸಿಂಗ್ ಎಂದು, ಆಕೆಗೆ ಫೋನ್ ಮಾಡಿದಾಗಲೆಲ್ಲ,ವಿಚಿತ್ರ ದಿಸ್ ಸೈಡ್ ಎಂದು ಶುರುವಿಡುತ್ತಾರೆ, ಆಕೆಯ ಹೆಸರು ಗೊತ್ತಿಲ್ಲದಕನ್ನಡಿಗರೇನಾದರೂ ಫೋನ್ ಮಾಡಿದರೆ ಹೌದೆ! ಏನಾಯ್ತು? ಎಂದೆನ್ನಬೇಕು! ಇನ್ನು ಬರಹದ ಎಲ್ಲ ಪ್ರಾಕಾರಗಳನ್ನು ಹೆಸರಿಟ್ಟುಕೊಂಡಿರುತ್ತಾರೆ ಕೇಳಬೇಕು, ಕಾದಂಬರಿ,ಸಾಹಿತ್ಯ, ಕವನ, ಪ್ರಬಂಧ, ಸಾಹಿತಿ ಇತ್ಯಾದಿ. ಸ್ವಲ್ಪ ಯೋಚಿಸಿ ಯಾರಿಗಾದರೂ ಪರಿಚಯಿಸುವಾಗ ಇವರು ಕಾದಂಬರಿ ಎಂದು ಹೇಳಿದರೆ, ಎಷ್ಟು ಪುಟದ್ದು, ಯಾರು ಬರೆದಿದ್ದು, ಮುನ್ನುಡಿ ಬೆನ್ನುಡಿ ಯಾರದ್ದು, ಓದಬಹುದೇ? ಎಂದಂದುಬಿಟ್ಟರೆ ಆಗುವ ಪೇಚಾಟವೆಷ್ಟು?!

ಈ ಹೆಸರುಗಳನ್ನು ಕೇಳಿ, ಕುಡುಮಿ ( ಪಾಪ ಹಿಂಗಾ ಹೆಸರಿಡೋದು!), ರಾಮದಾಸ್ ಗುಹಾ(ಅಜಂತಾನೋ ಎಲ್ಲೋರಾನೋ ಕೇಳ್ಬೇಕು), ನನ್ನ ಸ್ನೇಹಿತರೊಬ್ಬರು ತಮ್ಮ ಅವಳಿ ಮಕ್ಕಳಿಗೆ’ನಗು’ ಮತ್ತು ’ನಲಿ’ ಎಂದು ಹೆಸರಿಟ್ಟಿದ್ದರು (ಇನ್ನೊಂದು ಮಗು ಆಗಿದ್ದರೆ ’ಕುಣಿ’ಎಂದು ಹೆಸರಿಡೋರಿದ್ದರ ಕೇಳ್ಬೇಕಿತ್ತು).

ಒಂದಷ್ಟು ತಮಿಳು ಹೆಸರುಗಳನ್ನುಉಚ್ಚರಿಸುವುದಂತು ಕಬ್ಬಿಣದ ಕಡಲೆ ಬಾಯಿಗೆ ಹಾಕಿಕೊಂಡು ಕಟುಮ್ ಎಂದು ಕಡಿದಂತೆ. ತಮಿಳಿನಲ್ಲಿ ಎರಡು ಳ ಗಳಿವೆ. ಒಂದು ಸಾಮಾನ್ಯ ಳ ಇನ್ನೊಂದು ರ್ಳ, ಹೆಚ್ಚಿನ ತಮಿಳು ಹೆಸರುಗಳಲ್ಲಿ ಈ ರ್ಳ ಬಳಸುತ್ತಾರೆ. ಉದಾಹರಣೆಗೆ ಅರಿವರ್ಳಗನ್, ಎರ್ಳಿಲ್ ಅಳಗಿ, ಮಲರ್ ವಿರ್ಳಿ (ಉತ್ತರ ಭಾರತೀಯರ ಬಾಯಲ್ಲಿ ಇದು ಮಲರ್ ವಿಲಿ ಎಂದಾಗುತ್ತದೆ ಜೋರಾಗಿ ಕರೆದರೆ ಎಲ್ಲಿ ’ಇಲಿ’ ’ಇಲಿ’ ಎಂದು ಹೆದರಿಕೊಳ್ಳಬೇಕು), ಪುಗರ್ಳೇಂದ್ರನ್ (ಇದನ್ನು ಸರಿಯಾಗಿ ಉಚ್ಚರಿಸಿದರೆ ನೀವು ಸಂಸ್ಕೃತ ಪಂಡಿತರು), ಯಾರ್ಳಿನಿ ಇತ್ಯಾದಿ. ಉತ್ತರ ಭಾರತದ ಕೆಲವು ಸರ್ ನೇಮ್ surname ಗಳು ಅಷ್ಟೇ ತಮಾಶೆಯೆನಿಸುತ್ತವೆ, ಥಾಂಬೆ, ಗಾವ್ಡೆ, ’ಚಟ್ಟ’ರ್ಜಿ, ಮುಖ್ಯೋಪಧ್ಯಾಯ್ (ಯಾವ ಸ್ಕೂಲಿಗೆ ಎಂದು ಕೇಳೀರಿ ಮತ್ತೆ!), ಚಟ್ಟೋಪಧ್ಯಾಯ್ (ಚಟ್ಟ ಕಟ್ಟೋದರಲ್ಲಿ ಫೇಮಸ್ ಇರ್ಬೇಕು). ಜೆಮ್ ಶೆಡ್ ಪುರದವಳಾದ ನನ್ನ ಕಲೀಗ್ ಗೆ ’ಳ’ ಉಚ್ಛರಿಸಲು ಬರದು. ಇಂಟರ್ವ್ಯೂವ್ ಗೆ ಬಂದಿದ್ದ ’Vivek Tulluri’ ಎಂಬ ಆಂಧ್ರ ಯುವಕನ ಹೆಸರನ್ನು ಯಾವ ರೀತಿ ಕೆಡಸಿಟ್ಟಳು ಎಂದು ನಾನು ಬಾಯ್ಬಿಟ್ಟು ಹೇಳೋಲ್ಲಪ್ಪ…ಕನ್ನಡ ಬಂದ್ರೆ ನೀವೆ ಅರ್ಥ ಮಾಡ್ಕಳಿ!

ಮೈನಾ: ಚಿತ್ರ ವಿಮರ್ಶೆ


ತಮಿಳುನಾಡಿನ ಹಳ್ಳಿಗಳ ಜೀವನಶೈಲಿಯನ್ನು ಆಧರಿಸಿ, ಅಲ್ಲಿಯದೇ ಆಡುಭಾಷೆ ಬಳಸಿ ಮಾಡಿರುವ ತಮಿಳು ಚಿತ್ರಗಳ ಪೈಕಿ ನನಗೆ ನೆನಪಿರುವುದು, ಆಮೀರ್ ಸುಲ್ತಾನ್ ನಿರ್ದೇಶನದ ಪರತ್ತಿವೀರನ್ ಚಿತ್ರ, ಅದೇ ಸಾಲಿನಲ್ಲಿ ಸೇರಿಸಬಹುದಾದ ಚಿತ್ರ ಮೈನಾ. ಕತೆಯು, ಹಳ್ಳಿಯ ಜೀವನದ ರೀತಿಯನ್ನು ಪರಿಚಯಿಸುತ್ತ, ಪ್ರಕೃತಿಯ ಸೊಬಗನ್ನು ಬಿಂಬಿಸುತ್ತದೆ. ಅಲ್ಲದೆ, ಅನೇಕ ಸೂಕ್ಷ್ಮಗಳನ್ನು ಒಳಗೊಂಡಿದೆ. ಪ್ರತಿ ದೃಶ್ಯದಲ್ಲೂ ಪ್ರೇಕ್ಷಕನ ಊಹೆಯ ಜೊತೆ ಸೆಣೆಸಾಡಿ, ಎಲ್ಲದರ ಮೊತ್ತವೆಂಬಂತೆ ಸಿನಿಮಾ, ಪ್ರೇಕ್ಷಕನ ಊಹೆಗೂ ಮೀರಿ ಪರಿಣಾಮಕಾರಿಯಾದ ಕ್ಲೈಮ್ಯಾಕ್ಸನ್ನು ಹೊಂದಿದೆ. ಪ್ರತಿ ಪಾತ್ರವನ್ನು ಅದರ ಮನೋಸ್ಥಿತಿಯನ್ನು ನಮಗೆ ಕಟ್ಟಿಕೊಡುವ ದೃಶ್ಯಗಳಂತು ಅತ್ಯುತ್ತಮ.

ಸಿನಿಮಾದ ಎಳೆ ಸಾಮಾನ್ಯ ಪ್ರೇಮಕತೆ, ಜಗತ್ತಿನಲ್ಲಿ ಎಲ್ಲ ಕತೆಯೂ ಹೇಳಲ್ಪಟ್ಟಿದೆ, ಹೇಳುವ ರೀತಿಯಲ್ಲಿ ಅಷ್ಟೇ ಹೊಸತನವನ್ನು ತರಲಾಗುವುದು ಎನ್ನಲಾಗಿದೆ, ಮೈನಾ ಇದಕ್ಕೊಂದು ಉತ್ತಮ ಉದಾಹರಣೆ. ಚಿತ್ರದ ಸತ್ವವೆಲ್ಲ ಇರುವುದು ನಿರೂಪಣೆಯಲ್ಲಿ, ನಿರ್ದೇಶಕ ಇಡೀ ಕತೆಯನ್ನು ಹೊಸತಾಗಿ ಕಟ್ಟಿಕೊಡುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆನ್ನಬಹುದು. ಸಿನಿಮಾದ ಮೊಟ್ಟ ಮೊದಲನೆಯ ದೃಶ್ಯಕ್ಕೂ ಕೊನೆಯ ನಿಮಿಷದ ದೃಶ್ಯಕ್ಕೂ ಮಧ್ಯೆ ಬಂದಿರುವ ಅಷ್ಟೂ ದೃಶ್ಯಗಳು ಒಂದಕ್ಕೊಂದು ಹೇಗೆ ತಾಳೆಹಾಕಿಕೊಂಡಿವೆ ಎಂದು ತಿಳಿಯುವುದು ಕಡೆಯ ದೃಶ್ಯದ ನಂತರವೇ!

ಇಡೀ ಸಿನಿಮಾ ನಡೆಯುವುದು ಒಂದೇ ದಿನದಲ್ಲಿ ನಡೆಯುವ ಘಟನೆಗಳನ್ನಾಧರಿಸಿ. ಕತೆಗೆ ಪೋಷಕವಾಗಿ ಶುರುವಿನಲ್ಲಿ ಮೂವತ್ತು ನಿಮಿಷದ ಫ್ಲ್ಯಾಶ್ ಬ್ಯಾಕ್ ಬಿಟ್ಟರೆ ಉಳಿದ ಒಂದೂವರೆ ತಾಸಿನಷ್ಟು ಸಿನಿಮಾ ಕತೆಯು ದೀಪಾವಳಿಯ ಮುಂಚಿನ 24 ಗಂಟೆಗಳು ಇಬ್ಬರು ಪೋಲೀಸ್ ಆಫೀಸರ್ ಮತ್ತು ಇಬ್ಬರು ಪ್ರೇಮಿಗಳ ಸುತ್ತಲೇ ಸುತ್ತುತ್ತದೆ. ಮಗಳನ್ನು ತನಗೆ ಮದುವೆ ಮಾಡಿ ಕೊಡುವುದಿಲ್ಲ ಎಂದು ಹೇಳಿದ ಹೆಂಗಸಿಗೆ ಇಟ್ಟಾಡಿಸಿ ಹೊಡೆದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಲು ಹೋದ ಎಂಬ ಆರೋಪವನ್ನು ಹೊತ್ತು ಜೈಲು ಸೇರಿದ್ದ ಹೀರೋ ತನ್ನ ಪ್ರೇಯಸಿಯನ್ನು ಬೇರೆ ಯಾರೋ ಮದುವೆ ಮಾಡಿಕೊಳ್ಳಲು ಬರುತ್ತಿದ್ದಾರೆ ಎಂದು ತಿಳಿದು ಜೈಲಿನಿಂದ ಪರಾರಿಯಾಗುತ್ತಾನೆ. ಇತ್ತ ಹೊಸದಾಗಿ ಮದುವೆಯಾಗಿರುವ ಜೈಲರು ತನ್ನ ಸಿಡುಕು ಹೆಂಡತಿಗೆ ಇನ್ನೆರೆಡು ಗಂಟೆಯಲ್ಲಿ ಬಂದು ಅವಳನ್ನು ತವರಿಗೆ ಮದುವೆಯಾದ ಮೊದಲ ದೀಪಾವಳಿಗೆ (ತಲದೀಬಾವಳಿ) ಕರೆದೊಯ್ಯುವುದಾಗಿ ಮಾತು ಕೊಟ್ಟು ಬಂದಿರುತ್ತಾನೆ,ಅದಾಗಲೆ ಜೈಲಿನಲ್ಲಿ ನಡೆದ ಸಮಾರಂಭದಿಂದ ತಡವಾಗಿ ಹೆಂಡತಿ ಮತ್ತೆ ಮತ್ತೆ ಫೋನ್ ಮಾಡಿ ಕಾಡಿಸುತ್ತಿರುತ್ತಾಳೆ ಇದರಿಂದ ತಲೆಬಿಸಿಯಾಗಿದ್ದ ಅವನಿಗೆ ಪರಾರಿಯಾಗಿರುವ ಖೈದಿ ಸಿಗದೆ ಹೋದರೆ ಅಲ್ಲಿರುವ ಎಳೂ ಜನ ಪೋಲೀಸರುಗಳ ಕೆಲಸಕ್ಕೆ ಕುತ್ತು ಬರುವ ಸಂಭವವೇರ್ಪಟ್ಟಿದೆ ಎಂದು ತಿಳಿದು ಇನ್ನಷ್ಟು ತಲೆಕೆಡುತ್ತದೆ. ಪರಾರಿಯಾದ ಖೈದಿಯ ಮೇಲೆ ಕುತ್ತಿಗೆವರೆಗೂ ಸಿಟ್ಟಿಟ್ಟುಕೊಂಡು ಇನ್ನೊಬ್ಬ ಪೇದೆಯ ಜೊತೆ ಖೈದಿಯನ್ನು ಹುಡುಕುತ್ತಾ ಹೊರಡುತ್ತಾನೆ. ಈ ಮಧ್ಯೆ ಕಾಯುತ್ತಿರುವ ಹೆಂಡತಿಗೆ ಮತ್ತು ಅವಳ ಮನೆಯವರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಹೋಗಿ ಆಗದೆ ಸುಮ್ಮನಾಗುತ್ತಾನೆ.

ಇತ್ತ ಖೈದಿ ಓಡಿಬಂದು ತನ್ನ ಪ್ರೇಯಸಿ (ಮೈನಾ) ಯ ಅಮ್ಮನಿಗೆ ಮತ್ತೆ ಒದ್ದು ಮೈನಾಳನ್ನು ಕರೆದೊಯ್ಯುತ್ತಿರುವ ಸಂಧರ್ಭದಲ್ಲೇ ಅವನನ್ನು ಹುಡುಕಿಕೊಂಡು ಬಂದ ಪೋಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. ಅಲ್ಲಿ ನಡೆಯುವ ಗಲಾಟೆಯಲ್ಲಿ ಮೈನಾ ಕೂಡ ಅವನ ಜೊತೆ ಹೊರಟು ಬರುತ್ತಾಳೆ. ನಾಲ್ವರು ಮತ್ತೆ ಜೈಲಿನವರೆಗೂ ಬರುವುದೇ ಕತೆ. ನಾಯಕನು ಮೈನಾಳಿಗೋಸ್ಕರ ಬಂದಿದ್ದರೂ, ಕತೆಯು ಹೇಗೆ ಅವಳನ್ನೇ ಕೇಂದ್ರವಾಗಿರಿಸಿಕೊಂಡು ಮುಂದುವರೆದು ಮುಗಿಯುತ್ತದೆ ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಬೇಕು.

ಸಿನಿಮಾ ನೋಡುತ್ತಾ ನೋಡುತ್ತಾ ಪಾತ್ರಗಳು ಯಾವಾಗ ಆಪ್ತವಾಗಿಬಿಡುತ್ತದೋ ನಮಗೆ ತಿಳಿಯುವುದಿಲ್ಲ. ಆದರೆ ನಿರ್ದೇಶಕ, ಪ್ರೇಕ್ಷಕನ ಎಮೋಷನ್ ಗಳನ್ನು ಪರಿಗಣಿಸದೆ ಕತೆಯ ಪಾತ್ರಗಳ ಬಗ್ಗೆ ನಿರ್ಭಾವುಕವಾಗೇ ಉಳಿದು ಪರಿಣಾಮಕಾರಿಯಾದ ಕೊನೆಯನ್ನು ಕೊಟ್ಟಿದ್ದಾರೆ. ಹೀಗಾಗಿ ಕತೆಯು ಎಲ್ಲಿಯೂ ಕ್ಲೀಷೆಯೆನಿಸುವುದಿಲ್ಲ. ಚಿತ್ರವು ಅಚ್ಚುಕಟ್ಟಾಗಿದೆ, ಪ್ರತಿಯೊಂದು ಫ್ರೇಮನ್ನೂ ಏಕಾಗ್ರತೆಯಿಂದ ಮೂಡಿಸಿರುವುದು ನೋಡುತ್ತಲೇ ತಿಳಿಯುತ್ತದೆ. ಹಳ್ಳಿಯ ಹಸಿರು, ನಾಯಕನ ಹುಚ್ಚು ಒರಟು ಪ್ರೇಮ, ನಾಯಕಿಯ ಎಳಸು ಕಂಗಳು ಎಲ್ಲವೂ ಅದೆಷ್ಟು ಚೆನ್ನಾಗಿ ಮೂಡಿಬಂದಿದೆಯೆಂದು ನೀವು ಚಿತ್ರ ನೋಡಿಯೇ ತಿಳಿಯಬೇಕು.

ಗ್ರಾಮೀಣ ತಮಿಳು ಬಳಸಿದ್ದರೂ ಬಹಳಷ್ಟು ಪಾಲು ಕತೆಯನ್ನು ನಾವು ದೃಶ್ಯಗಳಲ್ಲೆ ತಿಳಿಯಬಹುದು. ನಿಮಗೆ ತಮಿಳು ಬರುತ್ತದೆಯಾದರೇ ಈ ಚಿತ್ರವನ್ನು ತಪ್ಪದೇ ನೋಡಿ, ಬರದಿದ್ದರೂ ನೋಡಿ ನಿಮಗೆ ನಿರಾಶೆಯಾಗದು. It is worth watching more than once

ನಿನ್ನ ನೆನಪು….

ಕಣ್ಮುಚ್ಚಿ ನನ್ನೊಳಕ್ಕಿಳಿದು ನೋಡುತ್ತೇನೆ,
ನಿನ್ನೊಂದಿಗಿನ ಸಂಭ್ರಮದ ಕ್ಷಣಗಳ ಕಚಗುಳಿ.

ನೆನಪುಗಳ ಜೊತೆ ಸವಾರಿ ಹೊರಡುತ್ತೇನೆ
ಕನಸಿನೂರಿನೊಳಗೆಲ್ಲ ನಿನ್ನದೆ ಮೆರವಣಿಗೆ,

ನಿನ್ನ ಕೋಪ, ನನ್ನ ಸಮಾಧಾನ,
ನನ್ನ ಹುಸಿಮುನಿಸು ನಿನ್ನ ಮುದ್ದು…

ಬಾಗಿಲಲ್ಲೇ ಕಾಯುತ್ತಾ ಕೂಡುತ್ತೇನೆ,
ಕಿವಿಗೆ ಕೇಳುವುದು ನಿನ್ನದೇ ಹೆಜ್ಜೆ ಸದ್ದು

ತುಂಬು ಬೆಳದಿಂಗಳು ಕಂಡಾಗಲೆಲ್ಲ ನಿನ್ನ ಮುಗುಳು ನಗೆಯ ನೆನಪು,
ಕತ್ತಲಲ್ಲಿ ಹೆದರಿದ ಜೀವ ತಡಕಾಡುವುದು ನಿನ್ನ ಎದೆಯ ಬಿಸುಪು,

ಕನಸಿನಿಂದ ಎಚ್ಚರಗೊಂಡು ಏಳಲೇಬಾರದೆನಿಸುತ್ತದೆ,
ಕಣ್ಣುಬಿಟ್ಟಾಗ ನೀನಿರದ ಹಾಸಿಗೆ ನನ್ನನ್ನು ಅಣಕಿಸುತ್ತದೆ.

ನಿನ್ನ ನೆನಪಿನಲ್ಲಿ ನಾನಿಲ್ಲಿ ಕಣ್ಣೀರಿಟ್ಟ ಕ್ಷಣ
ಸಿಹಿ ನಿದ್ದೆಯಲ್ಲು ನೀನು ಮುಲುಕಾಡಿ ಮಗ್ಗಲು ಬದಲಿಸುತ್ತೀಯ
ಅಲ್ಲವೇನೋ ಗೆಳೆಯ?

ಬೇಕಾಗಿದ್ದಾರೆ!


ಮದುವೆ ಆಗೋದು ಅಂತ ತೀರ್ಮಾನಿಸಿ ಬಿಟ್ಟಿದೀನಿ! ಬಂದ ’ಗಂಡು’ (ಗುಂಡು?) ಗಳನ್ನೆಲ್ಲ,
ಸ್ಟೀಲ್ ಬಿಂದಿಗೆ, ಹಿತ್ತಾಳೆ ಹಂಡೆ, ತೊಳೆದ ಕೆಂಡ, ನರಸಿಂಹರಾಜು ಮುಖ, ಅಂಬರೀಷ್
ಸೊಂಟ ಅಂತೆಲ್ಲ ಹೆಸರಿಟ್ಟು ರಿಜೆಕ್ಟ್ ಮಾಡ್ತಿದ್ದವಳು ಈಗ ಇದ್ದಕ್ಕಿದ್ದಂತೆ ಮದುವೆ
ಆಗೋದು ಅಂತ ತೀರ್ಮಾನಿಸಿ ಬಿಟ್ಟಿದ್ದೀನಿ. ಬುದ್ದನಿಗೆ ಬೋಧಿವೃಕ್ಷದ ಕೆಳಗಡೆ ಆದ ಹಾಗೆ
ನನಗೂ ನಮ್ಮ ಅಡುಗೆಮನೆಲಿ ಗ್ನಾನೋದಯ ಆಗಿ ಹೋಗಿದೆ. ನನ್ನಮ್ಮ ತನ್ನ ಪುಣ್ಯದ
ಅಕೌಂಟನ್ನು ಕ್ರೆಡಿಟ್ ಮಾಡಿಕೊಳ್ಳಲು ದೇವಸ್ಥಾನಗಳಿಗೆ ಹೊರಟು ಇಂದಿಗೆ ವಾರವಾಯಿತು.
ನಂಬುವ ಮಾತೇ ಅಲ್ಲ ಆದರೂ ನನ್ನಂತ ನಾನೇ ಈ ಒಂದು ವಾರವೂ ನನ್ನ ಬೆಳಗಿನ ತಿಂಡಿಯನ್ನು
ಬಲಿಕೊಟ್ಟಿದ್ದೇನೆ. ಈಗೊಂದು ವಾರದಿಂದ ಎದ್ದು ತಿಂಡಿ ಮಾಡಿಕೊಂಡು ತಿನ್ನುವುದಿರಲಿ,
ಯಾರಾದರೂ ಮಾಡಿಟ್ಟಿದ್ದರೂ ತಿನ್ನಲು ಸಮಯವಿಲ್ಲದಷ್ಟು ಲೇಟಾಗಿ ಹೋಗಿ, ಅರ್ಧಗಂಟೆ
ತಡವಾಗಿ ಆಫೀಸ್ ಸೇರಿ ಕಂಪ್ಯೂಟರ್ ನೊಳಗೆ ಕಳೆದು ಹೋದರೆ, ಮತ್ತೆ ತಿಂಡಿ
ತಿಂದಿಲ್ಲವೆಂದು ನೆನಪಾಗುವುದು ಊಟದ ಸಮಯಕ್ಕೆ. ಯಾವುದೇ ಡಯಟ್ಟಿನ ಸಹಾಯವಿಲ್ಲದೆ
ಅನಾಮತ್ತು ೨ ಕೆಜಿ ತೂಕ ಇಳಿಸಿಬಿಟ್ಟಿದ್ದೇನೆ.ಮುಂದೆ ಹೀಗಾಗಬಾರೆದೆಂಬ
ಮುನ್ನೆಚ್ಚರಿಕೆಗಾಗಿಯೇ ಚೆನ್ನಾಗಿ ಅಡುಗೆ ಬಲ್ಲ ಹುಡುಗನನ್ನು ಹುಡುಕಿ
ಮದುವೆಯಾಗಿಬಿಡಬೇಕೆಂದಿದ್ದೇನೆ. ಹೀಗೆಂದ ತಕ್ಷಣ ನನ್ನನ್ನು ಸಮಾನತೆ, ಸ್ತ್ರೀವಾದಿ
ಎಂದೆಲ್ಲ ಬ್ರಾಂಡ್ ಮಾಡಿಬಿಡಬೇಡಿ. ಚೆನ್ನಾಗಿ ಅಡುಗೆ ಬರುವ ಯಾವ ಹುಡುಗನೂ ನನ್ನ ಕೈಯ
ಅಡಿಗೆಯನ್ನು ತುಂಬಾ ದಿನ ಸಹಿಸಿಕೊಳ್ಳಲಾರನೆಂಬ ಕಾನ್ಫಿಡೆನ್ಸ್ ನಿಂದ ಈ
ಮಾತನ್ನು ಹೇಳುತ್ತಿದ್ದೇನೆ.

ಅಡುಗೆಮನೆ ಅನ್ನೋದು ಹುಡುಗಿಯರಿಗೆ ಅದೇಕೆ ಬ್ರಾಂಡ್ ಮಾಡಿದ್ದಾರೋ, ಏನೇ ಇದ್ದರೂ ನಾನು
ಮತ್ತು ಅಡುಗೆ ಎರೆಡೂ ವಿರುದ್ದ ಪದಗಳು. ಕಷ್ಟಪಟ್ಟು ವಾಂಗಿಭಾತ್ ಮಾಡುವುದನ್ನು
ಕಲಿತು, ಮನೆಗೆ ಬಂದ ಅತಿಥಿಗಳಿಗೆ ಒಮ್ಮೆ ಕೊಟ್ಟರೆ, ಪುಳಿಯೋಗರೆಗೆ ಸ್ವಲ್ಪ ಹುಳಿ
ಕಡಿಮೆ ಹಾಕಬೇಕಿತ್ತು ಎಂದಾಗ, ಅವರನ್ನೇ ಹುಣಸೇಹಣ್ಣಿನಂತೆ ಕಿವುಚಿಬಿಡುವ
ಮನಸ್ಸಾಗಿತ್ತು. ಅಪ್ಪನಿಗೆ ಅಮ್ಮ ಮನೆಯಲ್ಲಿ ಇಲ್ಲದಾಗ ಕಾಫಿ ಮಾಡಿಕೊಡಲೋ ಅಥವಾ ಟೀ
ಕುಡೀತೀರ ಎಂದು ಕೇಳಿದರೆ, ಯಾವುದನ್ನಾದರೂ ಮಾಡು ಮಗಳೇ ನೀ ಮಾಡಿದರೆ ಎರೆಡು ಒಂದೇ ತರ
ಇರುತ್ತೆ ಎಂದಂದು ನಗುತ್ತಾರೆ. ನಾನು ಮಾಡಿದ ಚಪಾತಿ ಯಾವಾಗಲೂ ಆಸ್ಟ್ರೇಲಿಯ ಮ್ಯಾಪ್
ತರಹ ಇರುತ್ತದೆಂದು ಅಕ್ಕನ ಪುಟ್ಟ ಮಗಳು ಹಿಯ್ಯಾಳಿಸುತ್ತಾಳೆ. ಅಲ್ಲರೀ ಆಸ್ಟ್ರೇಲಿಯ
ಮ್ಯಾಪ್ ಆದರೇನು ಇಂಡಿಯಾ ಮ್ಯಾಪ್ ಆದರೇನು ಮುರಿದೇ ತಾನೆ ತಿನ್ನುವುದು. ಹೊಟ್ಟೆ ಒಳಗೆ
ಏನು ಶೇಪ್ ಸಮೇತ ಹೋಗತ್ತ? ಬುದ್ದಿಇಲ್ಲ ಜನಕ್ಕೆ. ನನ್ನ ಹೊಸ ಪ್ರಯತ್ನವನ್ನು ಯಾರ
ಕೈಲದಾರೂ ಹೊಗಳಿಸಬೇಕೆಂದು ಮೊನ್ನೆ ಪಕ್ಕದ ಮನೆಯ ಹುಡುಗನಿಗೆ ನಾನು ಮಾಡಿದ್ದ
ತಿಂಡಿಯನ್ನು ಕಪ್ ನಲ್ಲಿ ಹಾಕಿಕೊಟ್ಟೆ, ’ಚೂರು ಸಪ್ಪೆ ಇತ್ತು ಅಕ್ಕ, ಪಾಯಸದಲ್ಲೆಲ್ಲೂ
ಬೇಳೆ ಕಾಣಲಿಲ್ಲ, ಆದರೂ ಚೆನ್ನಾಗಿದೆ’ ಎಂದುಬಿಟ್ಟ, ನನಗೆ ನಖಶಿಖ ಅಂತ ಉರಿದು
ಹೋಯಿತು, ನಾನು ಮಾಡಿದ್ದಿದ್ದು ಜಾಮೂನು, ಅದು ಗುಂಡಗೆ ಉಳಿಯದೇ ತನ್ನ ಶೇಪ್
ಕಳೆದುಕೊಂಡು ಪಾಕದಲ್ಲಿ ಕರಗಿ ಹೋಗಿತ್ತಷ್ಟೇ!!

ನಾನು ಅನ್ನ ಮಾಡುತ್ತೇನೆಂದರೆ ನನಗಿಂತ ಜಾಸ್ತಿ ನಮ್ಮ ಪಕ್ಕದ ಮನೆಯ ಆಂಟಿಗೆ ತುಂಬಾ
ಭಯ. ಅದು ಆಗಿದ್ದು ಇಷ್ಟು, ಅಕ್ಕಿ ಮತ್ತು ನೀರು ಕುಕ್ಕರಿಗೆ ಹಾಕಿ ಮೂರು ವಿಷಲ್
ಹಾಕಿಸಿದರೆ ಅನ್ನವಾಗುತ್ತದೆ ಎಂದು ಅಮ್ಮನ
ಬಾಯಲ್ಲಿ ಕೇಳಿದ್ದೆ ಪ್ರಾಕ್ಟಿಕಲ್ ಆಗಿ ಎಕ್ಸ್ ಪರಿಮೆಂಟ್ ಮಾಡಿರಲಿಲ್ಲ. ಅದೊಂದು ದಿನ
ಮಾಡಿ ನೋಡಿಯೇ ಬಿಡೋಣವೆನಿಸಿ ಅಕ್ಕಿ ನೀರು ಹಾಕಿ ಕುಕ್ಕರನ್ನು ಒಲೆಯಮೇಲಿಟ್ಟು ಟಿವಿ
ನೋಡುತ್ತ ಕುಳಿತು ಬಿಟ್ಟೆ ಎಷ್ಟು ಹೊತ್ತಾದರೂ ಕುಕ್ಕರ್ ವಿಷಲ್ ಹಾಕೋದನ್ನೆ ಮರೆತು
ಹೋಗಿತ್ತು. ಪಾಪ ಅದಕ್ಕೂ ಪಕ್ಕದಲ್ಲಿ ಸುಂದರ ಹುಡುಗಿಯರು ಯಾರೂ ಕಾಣಿಸಲಿಲ್ಲವೇನೋ,
ನಾನು ಬೇರೆ ಹಾಲಿನಲ್ಲಿದ್ದೆನಲ್ಲ. ಸುಮಾರು ಹೊತ್ತಾಯಿತು. ಏನೋ ಸೀದ ವಾಸನೆ
ಬರುತ್ತಿದೆ ಎಂದು ಎರಡನೇ ಫ್ಲೋರಿನ ಆಂಟಿ ಕಷ್ಟಪಟ್ಟು ತಮ್ಮ
ದೇಹವನ್ನು ನಮ್ಮ ಮನೆವರೆಗೂ ತಂದು ಏದುಸಿರು ಬಿಡುತ್ತಾ ಹೇಳಿದರು.
ಅನ್ನ ಮಾಡ್ತಿದ್ದೆ ಆಂಟಿ ಕುಕ್ಕರ್ ಇಟ್ಟು ತುಂಬಾ ಹೊತ್ತಾಯಿತು ವಿಷಲ್ ಹಾಕ್ತಿಲ್ಲ
ನೋಡಿ ಎಂದು ಅವರನ್ನು ಅಡುಗೆ ಮನೆಗೆ ಕರೆದೊಯ್ದು ತೋರಿಸಿದೆ, ಕುಕ್ಕರ್ ತಲೆಯಮೇಲೆ
ವಿಷಲ್ಲೇ ಇಲ್ಲವಲ್ಲೇ ಎಂದು ನನ್ನ ತಲೆಯ ಮೇಲೆ ಮೊಟಕಿದರು. ಅಷ್ಟೇ ಆಗಿದ್ದರೆ
ಚೆನ್ನಾಗಿತ್ತು, ಒಳಗೇನಾಗಿರಬಹುದು ನೋಡೋಣವೆನಿಸಿ ಕುಕ್ಕರ್ ನ ಮುಚ್ಚುಳ
ತೆಗೆಯುತ್ತಿದ್ದಂತೆ ಬಿಸಿ ಅನ್ನದ ಅಗಳುಗಳು ಕುಕ್ಕರಿನೊಳಗೆ ಇಣುಕುತ್ತಿದ್ದ ಆಂಟಿಯ
ಮುಖಕ್ಕೆ ಹಾರಿ, ಕೆಲದಿನಗಳವರೆಗು ಅವರು ಹೊರಗೆ ಮುಖ ತೋರಿಸದ ಹಾಗೆ ಕೆಟ್ಟದಾಗಿ
ಬೊಬ್ಬೆಗಳಾಗಿದ್ದವು. ಅವತ್ತಿನಿಂದ ಆಂಟಿ ನಾನು ಅನ್ನ ಮಾಡುತ್ತೇನೆಂದರೂ ಸಾಕು ಹೆದರಿ
ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸಿ ಕಳುಹಿಸುತ್ತಾರೆ.

ಇಷ್ಟೆಲ್ಲ ಆದರೂ ಅಡುಗೆಯನ್ನು ಕಲಿಯಲೇಬೇಕೆಂಬ ನನ್ನ ಹಂಬಲವೇನು ಕಡಿಮೆಯಾಗಿಲ್ಲ.
ಎಲ್ಲರಿಗಿಂತ ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿತು ಒಂದು ದಿನ ಯಾವುದಾದರೂ ಫೈವ್
ಸ್ಟಾರ್ ಹೋಟೇಲಿನ ಶೆಫ್ ಆಗ್ಬೇಕು ಅನ್ನೋದು ನನ್ನ ದೂರದ ಯೋಚನೆ.ಇಂತಹ ಮಹಾನ್
ಯೋಚನೆಯನ್ನಿಟ್ಟಿಕೊಂಡಿರುವ ನನಗೆ ಇಂತಹ ಸಣ್ಣಪುಟ್ಟ ತಪ್ಪುಗಳೆಲ್ಲ ಗಣನೀಯವೆನಿಸಿಲ್ಲ.
ಒಮ್ಮೊಮ್ಮೆ ಅನಿವಾರ್ಯವಾಗಿ ಬೇರೆಯವರ ಸುರಕ್ಷತೆಯ ದೃಷ್ಟಿಯಿಂದ ನನ್ನ ಸತತ
ಪ್ರಯತ್ನವನ್ನು ಕೈಬಿಡುತ್ತೇನೆ. ಹೀಗಾಗಿ ನಾನು ಮನೆಯಲ್ಲಿರದ ದಿನ ನೀನು ಅಡಿಗೆಮನೆಗೆ
ಹೋಗಬಾರದು, ಒಲೆ ಹಚ್ಚಬಾರದೆಂಬ ಅಮ್ಮನ ನಿಷೇದಾಜ್ಞೆಯನ್ನು ಶಿರಸಾವಹಿಸಿ
ಪಾಲಿಸುತ್ತಿದ್ದೇನೆ.

ನಾನು ಆಮ್ಲೇಟ್ ಮಾಡಿದರೆ ಅದು ಕಾವಲಿಯಿಂದ ಏಳಲು ಮುಷ್ಕರ ಹೂಡುತ್ತದೆ, ದೋಸೆಯು
ಹೆಂಚಿನಿಂದ ಹೊರಬರುವಷ್ಟ್ರಲ್ಲಿ ಉಡಿ ಉಡಿಯಾಗಿ ಅನ್ನದ ರೂಪ ಪಡೆದಿರುತ್ತದೆ. ಇಡ್ಲಿಗೂ
ಇಟ್ಟಿಗೆಗೂ ವ್ಯತ್ಯಾಸವೇ ಇರುವುದಿಲ್ಲ, ಇನ್ನು ಚಿತ್ರನ್ನವಂತು ದೇವರ ಮೇಲೆ ಎಸೆಯುವ
ಅಕ್ಷತೆಯ ಕಾಳಿನ ಹಾಗಿರುತ್ತದೆ, ಟೊಮೇಟೋ ಗೊಜ್ಜು ತನ್ನ ಅಸಲೀ ರೂಪ ಬಿಟ್ಟುಕೊಟ್ಟು
ಟೊಮೆಟೋ ರಸವಾಗಿಬಿಟ್ಟಿದೆ, ಇವೆಲ್ಲಾ ನನ್ನ ಅಡುಗೆಗೆ ಸಿಕ್ಕ ಕಾಂಪ್ಲಿಮೆಂಟ್ಸು. ಮರಳಿ
ಯತ್ನವ ಮಾಡು ಎಂಬ ಮಾತನ್ನು ಮರೆಯದೇ, ಟಿವಿಗಳಲ್ಲಿ ಬರುವ ಶೋಗಳನ್ನು ನೋಡಿ, ಪಾಕ
ಶಾಸ್ತ್ರದ ಪುಸ್ತಕಗಳನ್ನು ಓದಿ ಅಂತೂ ಹೇಗೋ ಆವಗವಾಗ ಅಡುಗೆ ಕಲಿಯುವ (ಕೊಲ್ಲುವ)
ಪ್ರಯತ್ನವನ್ನಂತು ಮಾಡುತ್ತಲೇ ಇರುತ್ತೇನೆ. ಆದರೆ ಇತ್ತೀಚೆಗೆ ನನ್ನ ಪಾಕ ಕ್ರಾಂತಿಯ
ಪರಿಣಾಮಗಳಿಂದಾಗಿ, ನಾನು ಮಾಡುವ ಅಡುಗೆಯನ್ನು ತಿಂದು ಅಭಿಪ್ರಾಯ ತಿಳಿಸಲು ಜನ
ಸಿಗುತ್ತಿಲ್ಲ ಎನ್ನುವುದೇ ಕೊರಗು, ಒಂದು ಮಹಾನ್ ಸಾಧನೆ ಇಂತಹ ಕಾರಣಗಳಿಂದ ನಿಲ್ಲಬಾರದೆಂಬ
ಉದ್ದೇಶದಿಂದ ಹೀಗೊಂದು ಅಡ್ವರ್ಟೈಸ್ ಮೆಂಟು, ’ನನ್ನ ಅಡುಗೆಯನ್ನು ರುಚಿ ನೋಡಲು ಜನ
ಬೇಕಾಗಿದ್ದಾರೆ. ಜೀವನ ಬೇಸರವಾಗಿರುವವರು, ಜೀವ ನಶ್ವರ ಎಂದುಕೊಂಡಿರುವವರಿಗೆ ಆದ್ಯತೆ!!’

(ವಿಜಯಕರ್ನಾಟಕದಲ್ಲಿ ಪ್ರಕಟಿತ)

ಮದರ್ ತೆರೇಸಾ ಸೋಗುಗಾತಿ, ಕಪಟಿ, ಹಿಪೋಕ್ರಿಟ್ ಎಂದವನು ಓಶೋ!!!

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು. ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:

ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ. ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.

ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಈ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಈ ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?


೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ಆ ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ೧ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಈ ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗು ಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.

ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ಈ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಈ ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?

ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು.

ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ, ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್‌ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.


***

ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಆ ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು. ಆದರೆ ನಿಜ ವಿಷಯ ಬೇರೆಯದೆ ಇತ್ತು. ಆ ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ
ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ
ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.

ನಿಮಗೆ ಒಂದು ವಿಷಯ ತಿಳಿದಿರಲಿ ಆ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!

ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.

ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿ,
ಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.
ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ, ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.

ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಈ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ. ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.

ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ. ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಈ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಈ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.

ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.

ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಥರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!

ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ. ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!

ಕತೆಯಾದ ಕುಂಟಪ್ಪ!

ಕುಂಟಪ್ಪನ ಹೆಸರು ಕುಂಟಪ್ಪನಲ್ಲ!

ಈಗ್ಯೆ ಎರೆಡು ವರ್ಷದ ಕೆಳಗೆ ಕುಂಟಪ್ಪನನ್ನು ಯಾರೂ ಕುಂಟಪ್ಪನೆಂದು
ಕರೆಯುತ್ತಿರಲಿಲ್ಲ. ಕುಂಟಪ್ಪನ ನಿಜವಾದ ಹೆಸರು ಮನ್ನೋಜಿ ರಾವ್ ಎಂದು. ಅಕಸ್ಮಾತಾಗಿ
ಯಾರಾದರೂ ತನ್ನ ಹೆಸರು ಹಿಡಿದು ಕೂಗಿದರೆ ಕುಂಟಪ್ಪನು ತುಂಬಾ ಖುಷಿಗೊಳ್ಳುತ್ತಾನೆ.
ಎರೆಡು ವರ್ಷದ ಹಿಂದೆ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಕುಂಟಪ್ಪನನ್ನು ಹಳ್ಳಿಯೇನು
ಅಷ್ಟು ಆಸ್ಥೆಯಿಂದ ಜ್ಞಾಪಿಸಿಕೊಳ್ಳುತ್ತಿರಲಿಲ್ಲ. ತಿರುಗಿ ಬಂದ ಅವನಿಗೆ ಸಂಭ್ರಮದ
ಸ್ವಾಗತವನ್ನೂ ಕೋರಲಿಲ್ಲ. ಇಂಥಹ ಎಷ್ಟೊ ಕುಂಟಪ್ಪರನ್ನು ಒಳಗೊಂಡ ಹಳ್ಳಿ ತನ್ನ ಪಾಡಿಗೆ
ತಾನಿದೆ.

ಕುಂಟಪ್ಪನ ಹಿನ್ನೆಲೆಯೂ ಏನಷ್ಟು ರೋಚಕವಾಗಿಲ್ಲ. ಈ ಮೊದಲು ಕುಂಟಪ್ಪನಿಗೆ
ಹಳ್ಳಿಯಲ್ಲೊಂದಷ್ಟು ಜಮೀನಿತ್ತು. ಈಗಿಲ್ಲ. ಕುಂಟಪ್ಪ ಒಂದಲ್ಲ ಎರೆಡು ಮದುವೆ ಆಗಿದ್ದ.
ಈಗ ಒಬ್ಬ ಹೆಂಡತಿಯೂ ಜೊತೆಗಿಲ್ಲ. ದೊಡ್ಡವಳು ಸತ್ತ ವರ್ಷಕ್ಕೇ ಇನ್ನೊಂದು ಮದುವೆಯಾದ
ಕುಂಟಪ್ಪನ ಎರಡನೇ ಹೆಂಡತಿ ಬಲು ಘಾಟಿ ಹೆಂಗಸು. ಕುಂಟಪ್ಪನೇನು ಮುಗ್ಧನಲ್ಲ. ಏರು
ದನಿಯಲ್ಲಿ ಜಗಳವಾಡುತ್ತಿದ್ದ ಅವಳನ್ನು ಮೂಲೆಗೆ ಕೆಡವಿ ಸಿಕ್ಕಸಿಕ್ಕಿದ್ದರಲ್ಲೆಲ್ಲ
ಸರಿಯಾಗಿ ಇಕ್ಕುತ್ತಿದ್ದ. ಅವನ ಒದೆತ ತಾಳಲಾರದೆ ಅವಳು ಹಿಂದಿನ ರಸ್ತೆಯ ಮಾಸ್ತರ ಜೊತೆ
ಓಡಿ ಹೋದಳು. ಇಬ್ಬಿಬ್ಬರನ್ನು ಕಟ್ಟಿಕೊಂಡು ಒಬ್ಬಳನ್ನೂ ಬಾಳಿಸದೇ ಹೋದ ಎಂದು, ಮಾತಿಗೆ
ಏನೂ ಸಿಗದಾಗ ಜನ ಕುಂಟಪ್ಪನ ಬಗ್ಗೆ ಆಡಿಕೊಳ್ಳುವುದುಂಟು. ಕುಂಟಪ್ಪನಿರುವ ಆ ಹಳ್ಳಿ
ಬೆಂಗಳೂರಿಗೆ ತೀರ ಸಮೀಪದಲ್ಲಿದೆ. ಬಿ.ಡಿ.ಎ ಲೇ ಔಟ್ ಗಳನ್ನು ಮಾಡಲು ಸರ್ಕಾರವು ರೈತರ
ಜಮೀನನ್ನು ಖರೀದಿ ಮಾಡಿತು. ಕುಂಟಪ್ಪನಿಗೆ ಊಟಕ್ಕೆ, ಸಾರಾಯಿಗೆ ಏನೂ ತೊಂದರೆ
ಇರಲಿಲ್ಲ. ಇದ್ದ ಜಮೀನಿನಲ್ಲಿ ಬೆಳೆದು, ವರ್ಷಕ್ಕಾಗುವಷ್ಟು ಇಟ್ಟುಕೊಂಡು
ಮಿಕ್ಕಿದ್ದನ್ನು ಮಾರಿ ಹೇಗೋ ಕಾಲ ತಳ್ಳುತ್ತಿದ್ದ. ಜಮೀನು ಮಾರಬೇಕಾದ ದರ್ದು ಖಂಡಿತ
ಅವನಿಗೆ ಇರಲಿಲ್ಲ. ಅವನು ಜಮೀನು ಮಾರಿದ್ದಕ್ಕೂ ಒಂದು ಹಿನ್ನಲೆಯಿದೆ.

ಕುಂಟಪ್ಪನಿಗೆ ಮಕ್ಕಳಿದ್ದಾರೆ. ಎರಡನೆ ಹೆಂಡತಿಯ ಮಕ್ಕಳು. ಮೊದಲನೆ ಹೆಂಡತಿಗೂ
ಮಕ್ಕಳಿದ್ದುವೇನೋ, ಅವರ ಬಗ್ಗೆ ಗೊತ್ತಿಲ್ಲ. ಈ ಎರಡನೆ ಹೆಂಡತಿ, ಮಾಸ್ತರ ಜೊತೆಗೆ ಓಡಿ
ಹೋಗುವ ಮೊದಲು ಇದ್ದ ಎರಡು ಮಕ್ಕಳನ್ನು ’ಹುಟ್ಟಿಸಿಲ್ವ ನೀನೇ ಸಾಕ್ಕೋ’ ಅಂತಂದು
ಕುಂಟಪ್ಪನ ಹತ್ತಿರವೇ ಬಿಟ್ಟು ಹೋಗಿದ್ದಳು. ತನ್ನ ಊಟಕ್ಕೆ ಪರದಾಡುತ್ತಿದ್ದ ಕುಂಟಪ್ಪ,
ಹಳ್ಳಿಯಲ್ಲಿ ಅವರಿಬ್ಬರನ್ನೂ ಸಾಕಲಾರದೆ, ಎರಡನೆ ಹೆಂಡತಿ ತಾಯಿಯ ಮನೆಗೆ ಅವನ್ನು
ಬಿಟ್ಟು ಬಂದಿದ್ದ. ಓಡಿಹೋದವಳ ಮಕ್ಕಳೆಂದು ಅವಕ್ಕೂ ಅಲ್ಲಿ ಸಿಕ್ಕ ಮರ್ಯಾದೆ
ಅಷ್ಟರಲ್ಲೇ ಇತ್ತು. ಚೆನ್ನಾಗಿ ಸಾಕುತ್ತಿಲ್ಲವೆಂದೂ ತಿಳಿದರೂ, ಅವರನ್ನು ಮನೆಗೆ ತಂದು
ಆರೈಕೆ ಮಾಡಲು ಚೈತನ್ಯವಿಲ್ಲದ ಅಸಹಾಯಕನಾಗಿದ್ದ ಕುಂಟಪ್ಪ ಆಗಾಗ ಹೋಗಿ ಮಕ್ಕಳನ್ನು
ನೋಡಿಕೊಂಡು, ಓಡಿ ಹೋದ ಹೆಂಡತಿಗೆ ಹಿಡಿ ಶಾಪ ಹಾಕಿ ಬರುತ್ತಿದ್ದ. ಇಬ್ಬರು ಮಕ್ಕಳೂ
ಬೆಳೆದು ಮದುವೆಯಾಗಿ ಈಗ ಇಬ್ಬಿಬ್ಬರು ಮಕ್ಕಳಿಗೆ ಪೋಷಕರಾಗಿದ್ದಾರೆ. ಆಟೋ
ಓಡಿಸಿಕೊಂಡಿದ್ದ ಅನುಭವದಿಂದಲೇ ಎಂಬಂತೆ ತಮಿಳು ಹುಡುಗಿಯನ್ನು ಓಡಿಸಿಕೊಂಡು ಹೋಗಿ
ಮದುವೆಯಾಗಿ, ಮಾವನ ಆಸ್ತಿಯ ಒಡೆಯನಾಗಿ ನೆಮ್ಮದಿಯಿಂದಿರುವವನು ಕುಂಟಪ್ಪನ ಹಿರಿಮಗ.
ಬಡತನದಲ್ಲೇ ಹುಟ್ಟಿ, ಮೂದಲಿಕೆಯಲ್ಲೇ ಬೆಳೆದು, ಅವರಿವರ ನೆರವಿನಿಂದ ಮದುವೆಯಾದ
ಹೆಣ್ಣುಮಗಳು ಮತ್ತು ಇಬ್ಬರು ಮಕ್ಕಳ ಅಮ್ಮ ಕುಂಟಪ್ಪನ ಎರಡನೆಯ ಸಂತಾನ. ಅಪ್ಪ-ಮಗ-ಮಗಳು
ಇವರಲ್ಲಿ ಸ್ವಾಭಾವಿಕವಾಗಿ ಇರಬೇಕಿದ್ದ ಪ್ರೀತಿ ಅವರಲ್ಲಿ ಇರಲಿಲ್ಲವೆನ್ನುವುದಕ್ಕಿಂತ
ಕಡಿಮೆ ಇತ್ತು ಎಂದರೆ ಸರಿಯೇನೋ.

ಕುಂಟಪ್ಪನ ಬಳಿ ಇದ್ದ ಜಮೀನು ಪಿತ್ರಾರ್ಜಿತವಾದ್ದರಿಂದ ಸಧ್ಯಕ್ಕೆ ಇದ್ದ ಇಬ್ಬರೂ
ಮಕ್ಕಳಿಗೂ ಅದರಲ್ಲಿ ಹಕ್ಕಿತ್ತು. ಬಿ.ಡಿ.ಎ. ಲೇ ಔಟುಗಳಾಗ ತೊಡಗಿ ಸರ್ಕಾರವು ಜಮೀನಿನ
ಖರೀದಿಗೆ ಒತ್ತಾಯಿಸಿದಾಗ, ಬೆಂಗಳೂರಿನಲ್ಲಿ ಇದ್ದುದ್ದರಲ್ಲೇ ಸಂಸಾರ ಮಾಡಿಕೊಂಡಿದ್ದ
ಕುಂಟಪ್ಪನ ಮಕ್ಕಳು, ಕುಂಟಪ್ಪನು ಸುತಾರಾಂ ಬೇಡವೆಂದರೂ ಕೇಳದೆ ಒಳ್ಳೆಯ ಬೆಲೆಗೆ
ಜಮೀನನ್ನು ಮಾರಿಬಿಟ್ಟರು. ಬಂದ ಹಣದಲ್ಲಿ ಸೈಟು ಮನೆ ಎಲ್ಲಾ ಖರೀದಿಸಲು ಆಗದೆ ಹೋದರೂ,
ಹಾಲಿ ಇದ್ದುದ್ದಕ್ಕಿಂತ ಅವರ ಜೀವನ ಉತ್ತಮ ಮಟ್ಟದ್ದಾಯಿತು. ಆದರೆ ಕುಂಟಪ್ಪನಿಗೆ
ಪೀಕಲಾಟಕ್ಕಿಟ್ಟುಕೊಂಡಿತು. ಜಮೀನಿಲ್ಲದೆ ಹಳ್ಳಿಯಲ್ಲಿ ತಾನು ಮಾಡುವುದೇನು ಎಂದು
ಜಮೀನು ಮಾರುವುದಕ್ಕೆ ಮುಂಚೆಯೇ ಮಕ್ಕಳಿಬ್ಬರಿಗೂ ಪ್ರಶ್ನಿಸಿದ್ದ, ಹೇಗಾದರೂ ಜಮೀನನ್ನು
ಮಾರಲೇ ಬೇಕೆಂದು ತೀರ್ಮಾನಿಸಿಕೊಂಡಿದ್ದ ಅವರಿಬ್ಬರೂ ’ನಾವಿಲ್ವ, ನಾವು ಸಾಕ್ತೀವಿ,
ನಮ್ಮನೇಲೆ ಬಂದಿರು’ ಎಂದು ಅವಸರಿಸಿ ಅವನ ಕೈಲಿ ಹೆಬ್ಬೆಟ್ಟೊತ್ತಿಸಿದ್ದರು. ಜಮೀನು
ಮಾರಿದ ಮೇಲೆ ಬಂದ ಹಣವನ್ನು ಹಂಚಿಕೊಂಡು, ಕುಂಟಪ್ಪನ ಕೈಲೊಂದಷ್ಟು ಹಣ ಇರುಕಿ ಹೋದ
ಮಕ್ಕಳು, ಮತ್ತವನ ಕಡೆ ತಿರುಗಿ ನೋಡಿರಲಿಲ್ಲ. ಕೈಲಿದ್ದ ಹಣ ಖಾಲಿಯಾಗುವವರೆಗೂ
ಕುಂಟಪ್ಪನಿಗೂ ಮಕ್ಕಳ ನೆನಪು ಬಂದಿರಲಿಲ್ಲ. ’ಕೂತು ಉಂಡರೆ ಕುಡಿಕೆ ಹೊನ್ನೂ ಸಾಲದು’
ಎಂಬ ಮಾತೆಷ್ಟು ನಿಜ. ಕುಂಟಪ್ಪನ ಕೈಲಿದ್ದ ದುಡ್ಡು ಖಾಲಿಯಾಗಿತ್ತು. ಅವರಿವರ ಹತ್ತಿರ
ಸಾಲ ಮಾಡಿ ಸೇಂದಿ ಏರಿಸಿ ಒಂದಷ್ಟು ದಿನ ಕಳೆದ. ಸಾಲವೂ ಹುಟ್ಟದಾದಾಗ, ಕುಂಟಪ್ಪನು
ಯೋಚಿಸಬೇಕಾಗಿ ಬಂತು. ಇದೆಲ್ಲದರ ಮಧ್ಯೆ ಕುಂಟಪ್ಪನಿಗೆ ಕಾಲಿನ ಕೊನೆಯಲ್ಲಿ ಕೆಟ್ಟದಾಗಿ
ವಾಸನೆ ಬಂದಂತಾಗಿ ಸಿಕ್ಕ ಸಿಕ್ಕ ಸೊಪ್ಪನ್ನೆಲ್ಲ ಅರೆದು ಹಚ್ಚುತ್ತಿದ್ದ.
ಯಾವುದರಿಂದಲೂ ವಾಸಿಯಾಗದಾದಾಗ ಕುಂಟಪ್ಪನಿಗೆ ಚಿಂತೆಗಿಟ್ಟುಕೊಂಡಿತು. ಅಷ್ಟು ದಿನ
ಮರೆತಿದ್ದ ಮಕ್ಕಳನ್ನು ತಟಕ್ಕನೆ ಜ್ಞಾಪಿಸಿಕೊಂಡು, ತನ್ನ ಜಮೀನು ಮಾರಿ ದುಡ್ಡು
ತಗಂಡು, ತನ್ನನ್ನು ಅಬ್ಬೇಪಾರಿಯಾಗಿಸಿ ಬಿಟ್ಟರೆಂದು, ತನ್ನ ಕಾಲಿಗೆ ಔಷದಿ ಮಾಡಿಸಲೂ
ತನ್ನಲ್ಲಿ ದುಡ್ಡಿಲ್ಲವೆಂದು ಬೈಯ್ಯ ತೊಡಗಿದ. ಅವರಿವರ ಕಿವಿಗೆ ಬಿದ್ದು ಅದು ಹೇಗೋ ಈ
ಮಾತುಗಳು ಅವನ ಮಕ್ಕಳ ಕಿವಿಯನ್ನೂ ತಲುಪಿತು. ಮಕ್ಕಳಿಬ್ಬರೂ ದೀರ್ಘ ಸಮಾಲೋಚನೆ ನಡೆಸ
ತೊಡಗಿದರು.

ತಾನೇ ಮಾವನ ಮನೆ ಸೇರಿಕೊಂಡಿದ್ದೇನೆ, ಅಪ್ಪನನ್ನು ಎಲ್ಲಿಟ್ಟುಕೊಳ್ಳಲಿ ಎಂದು ಮಗ
ತಗಾದೆ ತೆಗೆದ. ತನ್ನ ಗಂಡ ಒಪ್ಪಿದರೂ, ಮಗನಿದ್ದ ಮೇಲೆ ನಾನ್ಯಾಕೆ ಸಾಕಲಿ ಎಂದು ಮಗಳು
ಹಿಂತೆಗೆದಳು. ಜಗಳ ಬಗೆಹರೆಯದಾದಾಗ ಹಿರಿಯರೆನಿಸಿಕೊಂಡವರ ಮಧ್ಯಸ್ಥಿಕೆಯಲ್ಲಿ
ಕುಂಟಪ್ಪನು ಮಗಳ ಮನೆಯಲ್ಲಿ ಇರುವುದೆಂದೂ, ಮಗನು ಅಪ್ಪನ ದೇಕ್ ರೇಖಿಗೆ ತಿಂಗಳಾ
ಒಂದಷ್ಟು ಹಣ ಕೊಡುವುದೆಂದೂ ತೀರ್ಮಾನವಾಯಿತು. ಕುಂಟಪ್ಪನೂ ಇದಕ್ಕೆ ಒಪ್ಪಿದ. ತನ್ನ
ಹಳ್ಳಿಗೆ ಒಂದು ಸಲಾಮು ಹೊಡೆದು, ಮಗಳು ಮತ್ತು ಕೊಳೆಯುತ್ತಿದ್ದ ಕಾಲಿನ ಜೊತೆ
ಬೆಂಗಳೂರು ಬಸ್ಸನ್ನೇರಿದ.

ಮಗಳ ಮನೆ ಸುಸಜ್ಜಿತವಾಗಿತ್ತು. ಸ್ವಿಚ್ ಹಾಕಿದರೆ ಬಿಸಿ ನೀರು, ತಂಪಾಗಿಸಲು
ರೆಫ್ರಿಜರೇಟರು. ಬಟ್ಟೆ ಒಗೆಯಲು ಅದೆಂತದೋ ಮಶೀನು. ಮಲಗಲು ಮಂಚ, ನೋಡಲು ಟಿ.ವಿ.
ಕುಂಟಪ್ಪ ಖುಷಿಯಾಗಿ ಹೋದ. ಅವನಿಗೆ ಕಾಲಿನ ಗಾಯ ಮರೆತಂತೇ ಆಗಿತ್ತು. ಸ್ವಲ್ಪ ದಿನದ
ಮೇಲೆ ಮತ್ತೆ ಎಡಬಿಡದೇ ನೋವು ಕಾಡತೊಡಗಿದಾಗ, ಮಗಳು ಆತನನ್ನು ಆಸ್ಪತ್ರೆಗೆ
ಕರೆದುಕೊಂಡು ಹೋದಳು. ಆದರೆ ಅಷ್ಟ್ರರಲ್ಲಾಗಲೇ ಹಿಮ್ಮಡಿಯ ಮೇಲ್ಭಾಗದವರೆಗೂ ಕಾಲು
ಗ್ಯಾಂಗ್ರಿನ್ ಆಗಿ , ಕಾಲು ತೆಗೆಯದಿದ್ದರೇ ಅದು ಮೈಯೆಲ್ಲ ಹಬ್ಬುತ್ತದದೆಂದು ಡಾಕ್ಟರು
ಎಚ್ಚರಿಸಿದರು. ’ಏನಾದ್ರು ಆಗ್ಲಿ ನನ್ ಕಾಲು ಕತ್ತರಿಸಕ್ಕೆ ಬಿಡಲ್ಲ’ ಎಂದು ಕುಂಟಪ್ಪ
ಚೀರಾಡಿದರೆ, ಇದೆಲ್ಲಕ್ಕೂ ದುಡ್ಡೆಲ್ಲಿಂದ ಹೊಂಚುವುದೆಂದೂ ಮಗಳೂ ಮಗನೂ ತಲೆಮೇಲೆ ಕೈ
ಹೊತ್ತು ಕುಳಿತರು. ಮಗಳು ಸಣ್ಣದ್ದಕ್ಕೆಲ್ಲ ಸಿಡಿಮಿಡಿಗೊಳ್ಳ ತೊಡಗಿದರೆ. ಮಗ ದುಡ್ಡು
ಹೊಂಚಲು ಆಗುತ್ತಿರುವ ಕಷ್ಟವನ್ನೆಲ್ಲ ಹೇಳಿಕೊಂಡು ರೇಗುತ್ತಿದ್ದ. ಅಂತೂ ಕುಂಟಪ್ಪನ
ಕಾಲಿಗೆ ಆಪರೇಶನ್ ಆಗಿ, ಎಡಗಾಲು ಹಿಮ್ಮಡಿಯ ಮೇಲ್ಬಾಗದವರೆಗೆ ಇಲ್ಲವಾಯಿತು.
ಆಸ್ಪತ್ರೆಯವರು ಕೊಟ್ಟ ಕೋಲನ್ನು ಕಂಕುಳ ಕೆಳಗೆ ಇಟ್ಟುಕೊಂಡು ಓಡಿಯಾಡಲು ಕಲಿತ.
ಆಸ್ಪತ್ರೆ ಇಂದ ಮನೆಗೆ ಬಂದ ಮೇಲೆ ಮಗಳ ಸಿಡಿಮಿಡಿ ನಡೆದೇ ಇತ್ತು. ಕೇಳಿಸಿಕೊಳ್ಳದೆ
ಹೊರಗೆ ಹೋಗಲು, ಐದನೇ ಫ್ಲೋರಿನಲ್ಲಿದ್ದ ಮನೆಯಿಂದ ಕೆಳಗೆ ಇಳಿಯಲು ಕುಂಟಪ್ಪನ ಕೈಲಿ
ಅಲ್ಲಲ್ಲ ಕಾಲಲ್ಲಿ ಆಗುತ್ತಿರಲಿಲ್ಲ. ಕುಂಟಪ್ಪ ಅಂತರ್ಮುಖಿಯಾಗ ತೊಡಗಿದ್ದ. ಈಗೀಗ
ಅವನಿಗೆ ಎಲ್ಲವೂ ಬೇಸರವೆನಿಸುತ್ತಿತ್ತು. ಟೀವಿ ನೋಡದಾದ. ಹೊರಗೆ ಹೋಗಿಬರಲು ಮಕ್ಕಳ
ಮೊಮ್ಮಕ್ಕಳ ಸಹಾಯ ಕೇಳಿದರೆ ಅವರು ಸಿಟ್ಟು ಮಾಡಿಕೊಳ್ಳುತ್ತಿದ್ದರು. ಕುಂಟಪ್ಪನಿಗೆ
ಎಲ್ಲಿಯಾದರೂ ಓಡೇ ಹೋಗಬೇಕೆನಿಸುತ್ತಿತ್ತು. ರಾತ್ರಿಗಳಲ್ಲಿ ಎದ್ದು ಮನೆಯ ಹೊರಗೆ
ಗಸ್ತು ತಿರುಗ ತೊಡಗಿದ. ಏನೂ ಮಾಡಿದರೂ ಅವನ ತಳಮಳ ನಿಲ್ಲದಾಯಿತು.

ಅದೊಂದು ದಿನ ಮಗಳಿಗೆ ತನ್ನನ್ನು ಹಳ್ಳಿಗೆ ಕರೆದುಕೊಂಡು ಹೋಗಲು ದುಂಬಾಲು ಬಿದ್ದ.
ಸಿಟ್ಟುಗೊಂಡ ಮಗಳು ಆಗುವುದಿಲ್ಲವೆಂದು ಹೇಳಿದರೂ ಒತ್ತಾಯಿಸತೊಡಗಿದ, ಇವನ ಕಾಟ
ತಾಳಲಾರದೆಯೋ ಅಥವಾ ಕನಿಕರದಿಂದಲೋ ಅವನನ್ನು ಹಳ್ಳಿಗೆ ಕರೆದುಕೊಂಡು ಹೊರಟಳು. ಸುಮಾರು
೨ ವರ್ಷದ ಹಿಂದೆ ನೋಡಿದ್ದ ತನ್ನ ಹಳ್ಳಿಯನ್ನು ಮತ್ತೆ ನೋಡುತ್ತಲೇ ಕುಂಟಪ್ಪ
ಖುಷಿಗೊಂಡ. ತನ್ನ ಮನೆಯ ಸುತ್ತ ಮುತ್ತ ನಡೆದಾಡಿದ. ಮನೆಯ ಎದುರಿಗಿದ್ದ ತೆಂಗಿನ
ಮರವನ್ನು ನೇವರಿಸಿದ. ಹಸುಗಳನ್ನು ಕಂಡು ಮಾತಾಡಿಸಿದ. ಒಟ್ಟಿನಲ್ಲಿ ಅವನು
ಪ್ರಸನ್ನನಾಗಿದ್ದ. ಕತ್ತಲಾಗುತ್ತ ಬಂದಂತೆ ಮಗಳು ವಾಪಾಸ್ಸು ಹೊರಡಲು ಒತ್ತಾಯಿಸ
ತೊಡಗಿದಳು. ಕುಂಟಪ್ಪ ಏನು ಮಾಡಿದರೂ ಬರದಾದ. ಒಬ್ಬನೇ ಇಲ್ಲಿರುವುದು
ಕ್ಷೇಮವಲ್ಲವೆಂದೂ, ಅವನನ್ನು ನೋಡಿಕೊಳ್ಳಲು ಯಾರೂ ಅಲ್ಲಿಲ್ಲವೆಂದು ಹೇಳಿದರೂ
ಕುಂಟಪ್ಪನು ಮನ ಬದಲಿಸಲಿಲ್ಲ. ಬೇಸತ್ತ ಮಗಳು ಒಬ್ಬಳೇ ವಾಪಾಸ್ಸಾದಳು. ಬೇರಿಗೆ
ಅಂಟಿಕೊಂಡಿದ್ದ ಕುಂಟಪ್ಪನ ಮನಸ್ಸು ರೆಕ್ಕೆಗಳಿಗೆ ಹೊಂದಿಕೊಳ್ಳದಾಯಿತು. ಏನೇ ಆದರು
ಮತ್ತೆ ತನ್ನ ಹಳ್ಳಿ ಬಿಟ್ಟು ಹೋಗಬಾರದೆಂದು ತೀರ್ಮಾನಿಸಿದ.

ಅಂದಿನಿಂದ ಕುಂಟಪ್ಪ ಹಳ್ಳಿಯಲ್ಲೇ ಇದಾನೆ. ಇದಕ್ಕೂ ಮೊದಲು ಮಾನಣ್ಣ, ಮಾನೋಜಿ, ಮಾನಪ್ಪ
ನಾಗಿದ್ದವನು ಈಗ ಎಲ್ಲರ ಬಾಯಲ್ಲಿ ಕುಂಟಪ್ಪನಾಗಿದ್ದಾನೆ. ಮನೆಯಲ್ಲಿ ಸಹಾಯಕ್ಕೆ ಒಬ್ಬ
ಸಣ್ಣ ಹುಡುಗನನ್ನು ಇಟ್ಟುಕೊಂಡಿದ್ದಾನೆ. ಪಕ್ಕದ ಮನೆಯವರಿಗೆ ಮಾರಿಬಿಟ್ಟಿದ್ದ ತನ್ನ
ಹಸುಗಳನ್ನು ತಾನೇ ಸಾಕ ತೊಡಗಿದ್ದಾನೆ. ಆಗಾಗ ತನ್ನದಲ್ಲದ ಜಮೀನಿಗೆ ಹೋಗಿ
ಅಡ್ಡಾಡಿಕೊಂಡು ಬರುತ್ತಾನೆ.

Follow

Get every new post delivered to your Inbox.

Join 286 other followers